ಪುತ್ತೂರು: ದರ್ಬೆಯಲ್ಲಿ ಅಂಗಡಿ ಮಾಲಕ, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ಶಾಂತಿ ಭಂಗ ಉಂಟು ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಅಂಗಡಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆಯನ್ನು ನೈತಿಕ ಪೊಲೀಸ್ ಗಿರಿ ಎಂದು ಟೀಕಿಸಿದ್ದಾರೆ.
ಅಂಗಡಿಯ ವ್ಯವಹಾರ ಸ್ಥಳದಲ್ಲಿ ಪ್ರಮಾದ ನಡೆದಿದೆ ಎಂದಾದರೆ ಅದರ ಬಗ್ಗೆ ಪೊಲೀಸ್ ದೂರು, ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದಿತ್ತು. ಆದರೆ ಇದೆಲ್ಲವನ್ನು ಬಿಟ್ಟು ಅಂಗಡಿ ಮಾಲಕ, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವುದು ಖಂಡನೀಯ ಎಂದಿದ್ದಾರೆ.
ಇದಲ್ಲದೇ, ಗಲಾಟೆ ನಡೆದ ಬಳಿಕ ಅಂಗಡಿಯವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಪೊಲೀಸ್ ಸುಪರ್ಧಿಗೆ ತೆಗೆದುಕೊಂಡ ಬಳಿಕವೂ ಒಂದಷ್ಟು ಮಂದಿ ಹಲ್ಲೆ ನಡೆಸುವುದು ಪೊಲೀಸ್ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲ, ಹಲ್ಲೆ ನಡೆಸಿರುವುದು ದುರಹಂಕಾರದ ವರ್ತನೆ. ಅಂತಹವರನ್ನು ಇನ್ನೂ ಬಂಧಿಸಿಲ್ಲ. ಈಗ ಹುಡುಕುತ್ತಿದ್ದೇವೆ ಎಂದು ಹೇಳುವುದರ ಬದಲು, ಆಗಲೇ ಅರೆಸ್ಟ್ ಮಾಡಬಹುದಿತ್ತು. ಇದು ಕೂಡ ಪೊಲೀಸರ ಲೋಪ ಎಂದಿದ್ದಾರೆ.
ಅಂಗಡಿಯೊಳಗೆ ನುಗ್ಗಿ ಗಲಾಟೆ ಮಾಡಿದ ವ್ಯಕ್ತಿಗಳನ್ನು, ಹಲ್ಲೆ ಮಾಡಿದವರನ್ನು ತಕ್ಷಣವೇ ಬಂಧಿಸಬೇಕು. ಎರಡು ದಿನದ ಒಳಗಡೆ ಬಂಧನ ಆಗದೇ ಇದ್ದರೆ, ಹಿಂದೂ ಸಂಘಟನೆ ಹಾಗೂ ಸಾರ್ವಜನಿಕರು ಹೋರಾಟದ ಹಾದಿ ಹಿಡಿಯುವುದು ಅನುವಾರ್ಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
































