ಪುತ್ತೂರು: ಸನಾತನ ಹಿಂದೂ ಧರ್ಮದ ಮೇಲೆ ನಿರಂತರವಾಗಿ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದಾಳಿಗಳು ನಡೆದುಬಂದಿರುವುದು ಇತಿಹಾಸದಲ್ಲಿ ದಾಖಲಾದ ಸತ್ಯ. ಅಂತಹ ದಾಳಿಗಳ ಪರಿಣಾಮಗಳನ್ನು ಹಿಂದೂ ಸಮಾಜ ಇಂದಿಗೂ ಅನುಭವಿಸುತ್ತಿದೆ. ನಮ್ಮತನವನ್ನು ಮರೆತು ಬದುಕುವ ವಾತಾವರಣದಲ್ಲಿ ನಾವಿದ್ದೇವೆ. ಆದ್ದರಿಂದ ಸನಾತನ ವಿಚಾರಧಾರೆಗಳನ್ನು ತಿಳಿಸಿಕೊಡುವ ಪ್ರಯತ್ನಗಳು ನಡೆಯಬೇಕಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಆವರಣದಲ್ಲಿ ಶೃಂಗೇರಿಯ ಶ್ರೀ ಶಾರದಾಪೀಠದ ವತಿಯಿಂದ ಶ್ರೀ ಶಂಕರ ಭಗವತ್ಪಾದರ ಜನ್ಮಜಯಂತಿ ಪ್ರಯುಕ್ತ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಬ್ರಿಟಿಷರ ಆಡಳಿತ ಕಾಲದಲ್ಲೂ ನಮ್ಮ ವಿಚಾರಧಾರೆಗಳನ್ನು ಅರಿತುಕೊಳ್ಳುವುದಕ್ಕೆ ಮಾಧ್ಯಮವಾಗಿರುವ ಸಂಸ್ಕೃತ ಭಾಷೆಯ ಅಧ್ಯಯನಾವಕಾಶಗಳು ಸಾಕಷ್ಟಿದ್ದವು. ಆದರೆ ಸ್ವಾತಂತ್ರ್ಯನಂತರದ ಭಾರತದಲ್ಲಿ ಸಂಸ್ಕೃತದ ಆದ್ಯತೆ ಕಡಿಮೆಯಾಗುತ್ತಾ ಬಂದುದರ ಪರಿಣಾಮ ನಮ್ಮ ಸನಾತನ ಸಂಗತಿಗಳು ನಮಗಿಂದು ತಿಳಿಯದಂತಾಗಿದೆ. ಭಾರತೀಯರೇ ಭಾರತೀಯ ಉತ್ಕೃಷ್ಟ ಸಂಗತಿಗಳನ್ನು ತಿಳಿಯುವ ಬಗೆಗೆ ಆಸ್ಥೆ ವಹಿಸದಿದ್ದರೆ ಸಮಾಜದ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪ್ರಸ್ತವಾನೆಗೈದ ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಮಾತನಾಡಿ ಆದಿ ಶಂಕರಾಚಾರ್ಯರ ವಿಚಾರಗಳನ್ನು ಇಂದಿನ ಮಕ್ಕಳು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಂಕರ ಭಗವತ್ಪಾದರ ವಿಚಾರಗಳ ಆಧಾರದ ಮೇಲೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ಉಪಸ್ಥಿತರಿದ್ದರು. ಉಪನ್ಯಾಸಕಿ ಕುಸುಮಾ ಸ್ವಾಗತಿಸಿದರು. ಶಿಕ್ಷಕಿ ಗೌರಿ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿವಿಧ ಸ್ಪಧೆಗಳು ಸಂಪನ್ನಗೊAಡವು.
ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಸ್ಪರ್ಧಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಒದಗಿಸಿಕೊಡಲಾಗಿತ್ತು. ಎಳೆಯ ಮಕ್ಕಳಿಗೆ ಸ್ತೋತ್ರ ಕಂಠಪಾಠ, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಭಾಷಣ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಲ್ಯಾಪ್ಟಾಪ್, ಟ್ಯಾಬ್ ಒಳಗೊಂಡಂತೆ ಎರಡೂವರೆ ಲಕ್ಷ ರೂಪಾಯಿಗಳೂ ಅಧಿಕ ಮೊತ್ತದ ಬಹುಮಾನಗಳನ್ನು ಈ ಸ್ಪರ್ಧೆ ಒಳಗೊಂಡಿದ್ದು, ವಿಜೇತರಿಗೆ ಮೇ 7ರಂದು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಬಹುಮಾನ ವಿತರಿಸಲಿದ್ದಾರೆ.























