ಪುತ್ತೂರು: ಪುತ್ತೂರಿನ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವರ ಸ್ವರ್ಣ ಕವಚ ನಿರ್ಮಾಣಕ್ಕಾಗಿ 2 ಗ್ರಾಂ ಚಿನ್ನವನ್ನು ಸಮರ್ಪಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷೆ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ನೇತೃತ್ವದಲ್ಲಿ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ ಅರಿಯಡ್ಕ ಹಾಗೂ ಸಮಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಈ ಸ್ವರ್ಣ ಸಮರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಸಮಿತಿಯನ್ನು ಶಾಲು ಹೊದಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಅವರು ಪ್ರಸಾದ ವಿತರಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರಾದ ನ್ಯಾಯವಾದಿ ಹರಿನಾಕ್ಷಿ ಜೆ. ಶೆಟ್ಟಿ, ನಯನ ರೈ, ಶಾರದಾ ಅರಸ್, ಯಮುನಾ ರೈ, ಅನುಶ್ರೀ ಬಿ. ಶೆಟ್ಟಿ, ಜಯಂತಿ ಬಲ್ನಾಡ್, ಸ್ವರ್ಣಲತಾ ಹೆಗಡೆ, ಸುಜಯ, ಅಮಿತಾ ಆರ್. ಶೆಟ್ಟಿ, ಗುಲಾಬಿ ಶೆಟ್ಟಿ, ಗಂಗಾರತ್ನ ವಿ. ರೈ, ವಿಜಯ ಸರಸ್ವತಿ, ಸುಷ್ಮಾ ರೈ, ಅನುಷ್ಕಾ ರೈ, ಕಿರಣ್ ವಿ. ರೈ, ಅನುರೂಪ ಶೆಟ್ಟಿ, ಅನ್ನಪೂರ್ಣಿಮಾ, ಸಾರಿಕಾ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಭಾಷ್ ರೈ ಬೆಳ್ಳಿಪಾಡಿ, ನಳಿನಿ ಪಿ. ಶೆಟ್ಟಿ, ದಿನೇಶ್ ಪಿ.ವಿ. ಹಾಗೂ ಮಹಾಬಲ ರೈ ಒಳತಡ್ಕ ಉಪಸ್ಥಿತರಿದ್ದರು.
ಇದೇ ವೇಳೆ, ಆಗಸ್ಟ್ ತಿಂಗಳಲ್ಲಿ ನಡೆಯಲಿರುವ 19ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರಿಗೆ ಸಮಿತಿ ವತಿಯಿಂದ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಭಟ್ ಪಂಜಿಗುಡ್ಡೆ, ಶ್ರೀ ಮಹಾಲಿಂಗೇಶ್ವರ ದೇವರ ಸ್ವರ್ಣ ಕವಚ ನಿರ್ಮಾಣಕ್ಕೆ ಸಮಿತಿಯು ಚಿನ್ನ ಸಮರ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಈ ಸೇವಾ ಮನೋಭಾವ ಇತರ ಧಾರ್ಮಿಕ ಸಂಘಟನೆಗಳಿಗೂ ಮಾದರಿಯಾಗಲಿದೆ ಎಂದು ಹೇಳಿದರು.























