ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ 22ನೇ ವರ್ಷದ ಚಾತುರ್ಮಾಸ್ಯ ವ್ರತ ಬುಧವಾರ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ವೈಭವದಿಂದ ಆರಂಭಗೊಂಡಿತು.
ಶ್ರೀಗಳ 50ನೇ ವರ್ಷದ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ವರ್ಷಾಚರಣೆ ನಡೆಯಲಿದ್ದು, ವೈದಿಕ ಸಂಪ್ರದಾಯ, ಧಾರ್ಮಿಕ ಜಾಗೃತಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರ ಬೆಳಿಗ್ಗೆ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಇದರೊಂದಿಗೆ ಜನ್ಮವರ್ಧಂತಿ ಹಿನ್ನೆಲೆಯಲ್ಲಿ ಜಗದ್ಗುರುಗಳ ತುಲಾಭಾರ ಸೇವೆ, ಧರ್ಮಸಂಸತ್ತು ಜರಗಿತು. ಆಸ್ಥಾನ ವಿಧ್ವಾಂಸರು ಭಾಗವಹಿಸಿದ್ದರು. ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ಚಾತುರ್ಮಾಸ್ಯದ ಎಲ್ಲಾ ದಿನಗಳಲ್ಲಿ ಶ್ರೀದುರ್ಗಾ ನಮಸ್ಕಾರ ಪೂಜೆ, ಗುರುಪಾದುಕಾ ಪೂಜೆ, ಜಗದ್ಗುರುಗಳಿಂದ ಆಶೀರ್ವಚನ, ಪ್ರಸಾದ ಭೋಜನ, ಭಜನೆ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಸಂದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಹಾಗೂ ಚಾತುರ್ಮಾಸ್ಯದ ಕೊನೆಯ ವಾರದಲ್ಲಿ ಭಕ್ತರ ಅನುಕೂಲಕ್ಕಾಗಿ ಬೆಳಿಗ್ಗೆ 10.30 ಗಂಟೆಯಿಂದಲೇ ಗುರುಪಾದುಕಾ ಪೂಜೆ ಆರಂಭವಾಗಲಿದ್ದು, ಹಂತ ಹಂತವಾಗಿ ಫಲನ್ಯಾಸ ಹಾಗೂ ಮಂತ್ರಾಕ್ಷತೆ ವಿತರಿಸಲಾಗುವುದು.























