ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು ನಿಲ್ದಾಣಕ್ಕೆ ತಡವಾಗಿ ಆಗಮಿಸುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಆಗ್ರಹಿಸಲಾಗಿದೆ.
ಧನುಷ್ ಪುತ್ತೂರು ಎಂಬವರು ಈ ಬಗ್ಗೆ ಸಂದೇಶ ರವಾನಿಸಿದ್ದು, ತಾನು ದಿನನಿತ್ಯ ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದು, ಪ್ಯಾಸೆಂಜರ್ ರೈಲನ್ನೇ ಅವಲಂಭಿಸಿದ್ದೇನೆ. ಬೆಳಿಗ್ಗೆ 7.48 ಸುಬ್ರಹ್ಮಣ್ಯದಿಂದ ಪುತ್ತೂರಿಗೆ ರೈಲು ಆಗಮಿಸಬೇಕಾದ ಸಮಯ. ಆದರೆ ಇದೀಗ ರೈಲು 7.58, 8.00, 8.15 ಗಂಟೆಗೆ ಆಗಮಿಸಿರುವುದೂ ಇದೆ. ರೈಲಿನ ಅನಗತ್ಯ ವಿಳಂಬದಿಂದ ಕಚೇರಿ, ಕಾಲೇಜು ಸೇರಿದಂತೆ ತುರ್ತಾಗಿ ತೆರಳಬೇಕಾದವರಿಗೆ ತೊಂದರೆ ಆಗಿದೆ ಎಂದು ಗಮನ ಸೆಳೆದಿದ್ದಾರೆ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ನೀಡಿದ್ದು, ಸಂಸದರೂ ವಿಶೇಷ ಗಮನ ಹರಿಸಿ ರೈಲ್ವೇ ಇಲಾಖೆಯೊಂದಿಗೆ ಮಾತನಾಡಿ ಸರಿಯಾದ ಸಮಯಕ್ಕೆ ರೈಲು ಆಗಮಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.























