ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಘೋಷಿಸಿದ್ದ ಶಾಲಾ ರಜೆಯಿಂದ ಉಂಟಾದ ಬೋಧನಾ ದಿನಗಳ ಕೊರತೆಯನ್ನು ಸರಿದೂಗಿಸಲು ಸೆಪ್ಟೆಂಬರ್ 2ನೇ ಶನಿವಾರದಿಂದ ಪೂರ್ಣ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಸೂಚನೆ ನೀಡಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಹಾಗೂ ಮೂಡುಬಿದಿರೆ ಶೈಕ್ಷಣಿಕ ವಲಯಗಳಿಗೆ ಒಟ್ಟು 8 ಪೂರ್ಣ ದಿನ ಹಾಗೂ 1 ಅರ್ಧ ದಿನ ರಜೆ ಘೋಷಿಸಲಾಗಿತ್ತು. ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಶೈಕ್ಷಣಿಕ ವಲಯಗಳಿಗೆ ಒಟ್ಟು 9 ಪೂರ್ಣ ದಿನ ರಜೆ ನೀಡಲಾಗಿತ್ತು.
ಈ ರಜೆಯಿಂದ ಉಂಟಾದ ಬೋಧನಾ ಅವಧಿಯ ಕೊರತೆಯನ್ನು ಸರಿದೂಗಿಸಲು ಸೆಪ್ಟೆಂಬರ್ 2ನೇ ಶನಿವಾರದಂದು ಮಧ್ಯಾಹ್ನದ ಬಳಿಕ ಪೂರ್ಣ ತರಗತಿ ನಡೆಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರ ದಿನಗಳಲ್ಲಿ ಅಗತ್ಯವಿದ್ದಲ್ಲಿ ಸಂಜೆ ವೇಳೆಯಲ್ಲಿ ಹೆಚ್ಚುವರಿ ಒಂದು ಬೋಧನಾ ಅವಧಿ ನಡೆಸುವಂತೆಯೂ ಸೂಚಿಸಲಾಗಿದೆ.
ಪ್ರತಿ ಶಾಲೆಯು ಮಳೆಯ ರಜೆಯ ಲೆಕ್ಕಾಚಾರವನ್ನು ಆಧರಿಸಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಬೋಧನಾ ಅವಧಿಯನ್ನು ನಿರ್ಧರಿಸಬೇಕು. ಈ ಕುರಿತು ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ ಅಗತ್ಯ ದಿನಗಳನ್ನು ನಿಗದಿಪಡಿಸಿ, ವೇಳಾಪಟ್ಟಿಯಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.
ಶೈಕ್ಷಣಿಕ ಮಾರ್ಗಸೂಚಿಯನ್ವಯ ಅಗತ್ಯ ಬೋಧನಾ ದಿನಗಳನ್ನು ಪೂರ್ಣಗೊಳಿಸುವ ಮೂಲಕ ಮಳೆ ರಜೆಯಿಂದ ಉಂಟಾದ ಕೊರತೆಯನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.































