ಪುತ್ತೂರು: ಕಬಕ, ಪಡ್ನೂರು, ಕೊಡಿಪ್ಪಾಡಿ ಭಾಗದಲ್ಲಿ ಉಂಟಾಗಿದ್ದ ವಿದ್ಯುತ್ ವ್ಯತ್ಯಯ ಇಂದು ಮುಂಜಾನೆ ವೇಳೆಗೆ ಸರಿಯಾಗಿದೆ. ಇದರಿಂದಾಗಿ ಮೆಸ್ಕಾಂ ಕಚೇರಿ ಮುತ್ತಿಗೆ ಕರೆಯನ್ನು ವಾಪಾಸ್ ಪಡೆಯಲಾಗಿದೆ ಎಂದು ಪುರುಷೋತ್ತಮ್ ಮುಂಗ್ಲಿಮನೆ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ – ಮಳೆಗೆ ವಿದ್ಯುತ್ ತಂತಿಯ ಮೇಲೆ ಬಿದ್ದ ಮರದಿಂದಾಗಿ ವಿದ್ಯುತ್ ವ್ಯತ್ಯಯಗೊಂಡಿತ್ತು. ಮಾತ್ರವಲ್ಲ ಇನ್ಸುಲೇಟರ್ ಗಳು ಕೈಕೊಟ್ಟ ಪರಿಣಾಮ ಸುಮಾರು 40ಕ್ಕೂ ಹೆಚ್ಚು ಗಂಟೆಗಳ ಕಾಲ ಕಬಕ ಗ್ರಾಮದಾದ್ಯಂತ ಕತ್ತಲಲ್ಲಿ ಮುಳುಗಿತು.
ಕಾರ್ಯೋನ್ಮುಖರಾದ ಮೆಸ್ಕಾಂ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ, ವಿದ್ಯುತ್ ಸರಬರಾಜಿಗೆ ಸೂಕ್ತ ಕ್ರಮ ಕೈಗೊಂಡರು. ಆದರೆ ಸಿಬ್ಬಂದಿ ಕೊರತೆಯಿಂದ ಸಮರೋಪಾದಿ ಕ್ರಮ ಕೈಗೊಳ್ಳಲು ಇಲಾಖೆಗೆ ಸಾಧ್ಯವಾಗಿಲ್ಲ ಎಂದು ದೂರು ಗ್ರಾಮಸ್ಥರಿಂದ ಕೇಳಿಬಂದಿದೆ.
ಮೊದಲು ಕಬಕ ಗ್ರಾಮಕ್ಕೆ ಓರ್ವ ಲೈನ್ ಮ್ಯಾನ್ ಇದ್ದರು. ಆದರೆ ಈಗ ಕಬಕ ಕೊಡಿಪ್ಪಾಡಿ, ಪಡ್ನೂರು ಮೂರು ಗ್ರಾಮಗಳಿಗೆ ಓರ್ವ ಲೈನ್ ಮ್ಯಾನ್ ಹಾಕಲಾಗಿದೆ. ಸಿಬ್ಬಂದಿ ಕೊರತೆಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಜನಪ್ರತಿನಿಧಿಗಳು, ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಸಿಬ್ಬಂದಿ ಕೊರತೆ ನೀಗಿಸುವಂತೆ ಪುರುಷೋತ್ತಮ್ ಮುಂಗ್ಲಿಮನೆ ಆಗ್ರಹಿಸಿದ್ದಾರೆ.


















