ಪುತ್ತೂರು: ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದ ಅಭಿವೃದ್ಧಿ ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ನೆದರ್ಲ್ಯಾಂಡ್ ಮೂಲದ ತಾಂತ್ರಿಕತೆಯನ್ನು ಬಳಸಿಕೊಂಡು ಕಂಪೆನಿಯೊಂದರ ಮೂಲಕ ಸುಮಾರು 6 ಕಿ.ಮೀ. ಸುತ್ತಳತೆಯಲ್ಲಿ ಪುತ್ತೂರು ನಗರದ ಒಳಚರಂಡಿ ವ್ಯವಸ್ಥೆಗೆ 50 ಕೋ.ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಕೆಯಾಗಿದ್ದು, ಅದಕ್ಕೆ ರಾಜ್ಯ ಸರಕಾರಕ್ಕೆ ಮಂಜೂರಾತಿ ನೀಡಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ದೇವಸ್ಥಾನದ ಬಳಿ ಮಹಿಳಾ ಪೊಲೀಸ್ ಠಾಣಾ ಕಡೆಯಿಂದ ಸ್ಮಶಾನದವರೆಗೆ ನಿರ್ಮಾಣಗೊಳ್ಳಲಿರುವ ಸುಮಾರು 3.50 ಕೋ.ರೂ.ವೆಚ್ಚದ 30 ಅಡಿ ಅಗಲದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿ ಎಂಜಿನಿಯರ್ ಗಳಿಂದ ಮಾಹಿತಿ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದರು.
ಪುತ್ತೂರಿನ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ಈ ಹಿಂದೆ ಸುಮಾರು 200 ಕೋ.ರೂ.ಗಳಲ್ಲಿ ಗ್ರಾವಿಟಿ ನೆಲೆಯಲ್ಲಿ ನೀರು ಹರಿಯುವ ವ್ಯವಸ್ಥೆಯ ಯೋಜನೆಗೆ ಡಿಪಿಆರ್ ಮಾಡಿದ್ದು, ಈ ಕುರಿತು ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದಾಗ ಅದನ್ನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿತ್ತು. ಹೀಗಾಗಿ ಹೊಸ ತಾಂತ್ರಿಕತೆಯ ಮೂಲಕ ನಾವು 50 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಿ, ನಗರಾಭಿವೃದ್ಧಿ ಇಲಾಖೆ ಸಚಿವ ಡಾ.ಯತೀಂದ್ರ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದೇನೆ.
ದೇವಸ್ಥಾನದ ಮ್ಯಾಸ್ಟರ್ ಪ್ಲಾನ್ ನಂತೆ ಮಹಿಳಾ ಪೊಲೀಸ್ ಠಾಣಾ ಕಡೆಯಿಂದ ಸ್ಮಶಾನದವರೆಗೆ 30 ಅಡಿ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ಶೀಘ್ರ ಕಾಮಗಾರಿ ಆರಂಭ ಮಾಡುತ್ತೇವೆ. ಆದರೆ ರಸ್ತೆ ನಿರ್ಮಿಸಿ ಅಗೆಯುವ ಕೆಲಸ ಆಗಬಾರದು ಎನ್ನುವ ಕಾರಣಕ್ಕೆ ಕಾಂಕ್ರೀಟ್ ರಸ್ತೆಯ ಜತೆಗೆ ಬೊಳುವಾರು ಭಾಗದಿಂದ ಬರುವ 6 ಕಿ.ಮೀ. ವ್ಯಾಪ್ತಿಯ ಕೊಳಚೆ ನೀರಿನ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ದೊಡ್ಡ ಪೈಪು ಅಳವಡಿಸುವ ಕಾರ್ಯ ಮಾಡಲಿದ್ದೇವೆ. ಮುಂದೆ ಒಳಚರಂಡಿ ಯೋಜನೆ ಅನುಷ್ಠಾನದ ಸಂದರ್ಭ ಅದಕ್ಕೆ ಸಂಪರ್ಕ ನೀಡಲಾಗುತ್ತದೆ. ಈ ಕುರಿತು ಸಂಬಂಧಪಟ್ಟ ಕಂಪೆನಿಯವರ ಜತೆಗೂ ಚರ್ಚೆ ನಡೆಸಲಾಗಿದೆ. ದೇವಸ್ಥಾನದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಕೂಡ ಒಳಚರಂಡಿ ವ್ಯವಸ್ಥೆಗೆ ಪೂರಕವಾಗಿ ಅನುಷ್ಠಾನಗೊಳಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ದೇವಸ್ಥಾನದ ಬಳಿ ಇರುವ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ಸಂಬಂಧಿಸಿ ಈ ಹಿಂದೆ ಅವರಿಗೆ 9 ಸೆಂಟ್ಸ್ ಜಾಗ ಗುರುತಿಸಲಾಗಿದ್ದು, ಅದು ಸಾಕಾಗುವುದಿಲ್ಲ ಎಂದು ಹೇಳಿರುವುದಕ್ಕೆ 30 ಸೆಂಟ್ಸ್ ಜಾಗ ಗುರುತಿಸಿ ಶೀಘ್ರ ಮಂಜೂರಾತಿ ದೊರೆಯಲಿದೆ. ಬಳಿಕ ಠಾಣೆಯನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದು ಎಂದರು.
ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಎಂಜಿನಿಯರ್ ಗಳು ಉಪಸ್ಥಿತರಿದ್ದರು.






















