ಪುತ್ತೂರು: ಮುಕ್ರಂಪಾಡಿಯ ಕೆಎಸ್ಆರ್ಟಿಸಿ ಡಿಪೋ ಮುಂಭಾಗದ ರಸ್ತೆ ಬದಿಯ ಮರದಲ್ಲಿ ಅಪಾಯಕಾರಿಯಾಗಿ ಕಟ್ಟಿಕೊಂಡಿದ್ದ ಭಾರೀ ಗಾತ್ರದ ಹೆಜ್ಜೇನು ಗೂಡನ್ನು ಶುಕ್ರವಾರ ರಾತ್ರಿ ತೆರವುಗೊಳಿಸಲಾಯಿತು.
ಕಳೆದ ಕೆಲವು ದಿನಗಳಿಂದ ರಸ್ತೆ ಬದಿಯ ಮರದಲ್ಲಿ ಹೆಜ್ಜೇನು ಗೂಡು ಕಾಣಿಸಿಕೊಂಡಿದ್ದು, ಹಗಲು ವೇಳೆಯಲ್ಲಿ ಹೆಜ್ಜೇನುಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವು. ಅಲ್ಲದೆ, ಮಂಗಗಳು ಗೂಡಿಗೆ ಹಾನಿ ಮಾಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಥಳೀಯರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೂರು ನೀಡಿದ್ದರು.
ಕಾರ್ಯಕರ್ತರ ಮೂಲಕ ಗೂಡು ತೆರವು
ದೂರು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರು. ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೂ ತರಲಾಗಿತ್ತು.
ಅದರಂತೆ ಶುಕ್ರವಾರ ಸಂಜೆ ಕ್ರೇನ್ ಯಂತ್ರದ ಸಹಾಯದಿಂದ ಹೆಜ್ಜೇನು ಗೂಡನ್ನು ಬೆಂಕಿ ಹಚ್ಚಿ ತೆರವುಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ 50ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.
ಪಡ್ನೂರು ಘಟನೆ ಮರುಕಳಿಸದಿರಲಿ: ಶಾಸಕ
“ಕೆಲವು ತಿಂಗಳ ಹಿಂದೆ ಪಡ್ನೂರಿನಲ್ಲಿ ಹೆಜ್ಜೇನು ಕಡಿತಕ್ಕೊಳಗಾಗಿ ಶಾಲೆಗೆ ತೆರಳುತ್ತಿದ್ದ ಪುಟ್ಟ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿತ್ತು. ಮುಕ್ರಂಪಾಡಿಯಲ್ಲೂ ರಸ್ತೆ ಬದಿಯಲ್ಲೇ ಹೆಜ್ಜೇನು ಗೂಡು ಇರುವ ಬಗ್ಗೆ ಗುರುವಾರ ದೂರು ಬಂದಿತ್ತು. ಪಡ್ನೂರಿನ ಘಟನೆ ಮತ್ತೆ ಮರುಕಳಿಸದಿರಲಿ ಎಂಬ ಉದ್ದೇಶದಿಂದ ಗೂಡನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದೆ. ಅದರಂತೆ ತೆರವು ಕಾರ್ಯ ನಡೆದಿದೆ. ಇದು ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಂಡ ಕ್ರಮ,” ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಶಾಸಕರ ಸ್ಪಂದನೆಗೆ ಮೆಚ್ಚುಗೆ
“ಗುರುವಾರ ಶಾಸಕರಿಗೆ ದೂರು ನೀಡಿದ್ದೆವು. ಮರುದಿನವೇ ಹೆಜ್ಜೇನು ಗೂಡನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿ, ಅರಣ್ಯ ಇಲಾಖೆಯ ಗಮನಕ್ಕೂ ತಂದು ತೆರವು ಕಾರ್ಯಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ನಮ್ಮ ಸಣ್ಣ ವಿಚಾರಕ್ಕೂ ಸ್ಪಂದಿಸಿ ಸಾರ್ವಜನಿಕರಿಗೆ ನೆರವಾಗಿರುವುದು ಮೆಚ್ಚುವಂತಹದ್ದು,” ಎಂದು ಸ್ಥಳೀಯರಾದ ಅಶೋಕ್ ಆಚಾರ್ಯ ಹಾಗೂ ಮುಹಮ್ಮದ್ ಶರೀಫ್ ತಿಳಿಸಿದ್ದಾರೆ.


































