ದೊಡ್ಡ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದ ಭಾರತೀಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ ಚಂದು ಎಂಬ ಯುವಕ ಮೃತ ವ್ಯಕ್ತಿ.
ಮಾಹಿತಿಯ ಪ್ರಕಾರ, ಚಂದು ಅವರು ಅಮೆರಿಕದ ಡಿಪಾಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗ ಹುಡುಕಾಟದಲ್ಲಿದ್ದ ಅವರು ಕಳೆದ ಹಲವು ವಾರಗಳಿಂದ ಕೆಲಸ ಸಿಗದೇ ನಿರಾಶೆಗೊಂಡಿದ್ದರು.
ಇದೇ ವೇಳೆ, ಕರ್ನೂಲ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅವರ ತಂದೆ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ಮತ್ತು ಕುಟುಂಬದ ಸಾಲದ ಭಾರವು ಚಂದು ಮೇಲೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿದೆ ಎಂದು ತಿಳಿದುಬಂದಿದೆ. ನಿರಂತರ ಒತ್ತಡವನ್ನು ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ವಾಸಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದುರ್ಘಟನೆ ಬಳಿಕ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಸುಮಾರು ರೂ.20 ಲಕ್ಷ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಈ ವೆಚ್ಚವನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ನಿಧಿಸಂಗ್ರಹಣೆಯನ್ನು ಆರಂಭಿಸಿದೆ. ಎರಡು ದಿನಗಳಲ್ಲಿ $76,000ಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿದ್ದು, ಅದರಲ್ಲಿ $25,000ವನ್ನು ಕುಟುಂಬದ ಸಾಲ ತೀರಿಸಲು ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಸಂತಾಪ ವ್ಯಕ್ತಪಡಿಸಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕೇಂದ್ರದ ಸಹಾಯ ಕೋರಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ರಾಮ್ ಮೋಹನ್ ನಾಯ್ಡು ಕಿಂಜರಪು ಕೂಡ ತಕ್ಷಣ ಸ್ಪಂದಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕ್ರಿಯೆಯನ್ನು ವೇಗಗೊಳಿಸುವ ಭರವಸೆ ನೀಡಿದ್ದಾರೆ.
ಚಂದು ತಮ್ಮ ಕುಟುಂಬದ ಆಶಾಕಿರಣವಾಗಿದ್ದು, ಕಿರಿಯ ಸಹೋದರ ಮತ್ತು ಸ್ನೇಹಿತರಿಗೆ ಸಹಾಯವಾಗಿದ್ದ ವ್ಯಕ್ತಿಯಾಗಿದ್ದರು ಎಂದು ಸಮುದಾಯ ಸದಸ್ಯರು ತಿಳಿಸಿದ್ದಾರೆ. ಆದರೆ ವಿಧಿಯ ಕ್ರೂರ ತಿರುವಿನಿಂದ ಅವರ ಬದುಕು ಅರ್ಧದಲ್ಲೇ ಅಂತ್ಯಗೊಂಡಿದೆ.























