ಪುತ್ತೂರು: ಅಕ್ಷಯ ಕಾಲೇಜಿನ ಬೈಟ್ಬ್ಲಿಟ್ಜ್–ಐಟಿ ಕ್ಲಬ್ ಹಾಗೂ ಐಕ್ಯೂಎಸಿ (IQAC) ಸಂಯುಕ್ತ ಆಶ್ರಯದಲ್ಲಿ, ಅಭಿಜ್ಞ ಎಜುಕೇಶನ್ ಸಹಯೋಗದೊಂದಿಗೆ ಒಡಂಬಡಿಕೆ (MoU) ಸಹಿ ಕಾರ್ಯಕ್ರಮ ಹಾಗೂ ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ (Cyber Security) ಮತ್ತು ಡೇಟಾ ಅನಾಲಿಟಿಕ್ಸ್ (Data Analytics) ಕುರಿತ ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಶಾಂಕ್ ಶೆಟ್ಟಿ, ಎನ್ಎಂಎಎಂಐಟಿ (NMAMIT)ಯ ಸಿಎಸ್ಇ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಇನ್ಸ್ಪಿರಾಂಟೆ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸಹ-ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಐ, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗಾವಕಾಶಗಳಿದ್ದು, ತಾಂತ್ರಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಅನುಭವ ಮತ್ತು ನಿರಂತರ ಕಲಿಕೆಯೇ ಯಶಸ್ಸಿನ ಗುಟ್ಟು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಒಡಂಬಡಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಸಹಭಾಗಿತ್ವದಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿಜ್ಞ ಎಜುಕೇಶನ್ ಸಂಸ್ಥಾಪಕ ಅಭಿಲಾಷ್ ಕ್ಷತ್ರಿಯ ಮಾತನಾಡಿ, ಒಡಂಬಡಿಕೆಯಡಿ ವಿದ್ಯಾರ್ಥಿಗಳಿಗೆ ಎಐ, ಸೈಬರ್ ಭದ್ರತೆ ಹಾಗೂ ಡೇಟಾ ಅನಾಲಿಟಿಕ್ಸ್ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಲೈವ್ ಇಂಡಸ್ಟ್ರಿ ಪ್ರಾಜೆಕ್ಟ್ಗಳಲ್ಲಿ ಭಾಗವಹಿಸುವ ಅವಕಾಶ, ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ಹಾಗೂ ಇಂಟರ್ನ್ಶಿಪ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಬಿಸಿಎ ವಿಭಾಗದ ಮುಖ್ಯಸ್ಥೆ ದೀಕ್ಷಾ ರೈ ಸೇರಿದಂತೆ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಾವಣ್ಯ ಪ್ರಾರ್ಥಿಸಿದರು. ಅಭಿಲಾಷ್ ಕ್ಷತ್ರಿಯ ಸ್ವಾಗತಿಸಿದರು. ದೀಕ್ಷಾ ರೈ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸುಪ್ರಭಾ ಕೆ. ಕಾರ್ಯಕ್ರಮ ನಿರೂಪಿಸಿ, ಸರೋಶ್ ನಾಯಕ್ ವಂದಿಸಿದರು.






















