ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಬರಬೇಕಾದ ನೀರಿನ ಪಾಲನ್ನು ಯಾರಾದರೂ ಕಸಿದುಕೊಳ್ಳಲು ಬಂದರೆ, ಅಂತಹವರ ಕೈಗಳನ್ನು ನಾವು ಕತ್ತರಿಸುತ್ತೇವೆ ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಭಾರತದ ಹೆಸರು ಉಲ್ಲೇಖಿಸದೆ ಬೆದರಿಕೆ ಹಾಕಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪರೋಕ್ಷವಾಗಿ ಟೀಕಿಸಿದ ಅವರು, “ನೆರೆ ದೇಶದ ಪ್ರಧಾನಿಯವರ ಕೈಯಲ್ಲಿ ಒಂದು ನಲ್ಲಿ ಇದೆ. ಅವರು ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ದೇಶದ ಶೇ 40ರಿಂದ 50ರಷ್ಟು ಜನಸಂಖ್ಯೆ ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದೆ. ಯಾರೋ ಒಬ್ಬರು ನಮ್ಮ ದೇಶದ ಆಹಾರ ಭದ್ರತೆ, ಶೇ 50ರಷ್ಟು ಉದ್ಯೋಗ ಮತ್ತು ಶೇ 25ರಷ್ಟು ಆರ್ಥಿಕತೆಯನ್ನು ನಿಯಂತ್ರಿಸಲು ನೋಡುತ್ತಿದ್ದಾರೆ. ಜಾಗತಿಕವಾಗಿ ಕೆಳಮಟ್ಟದ ಜಲಾನಯನ ಪ್ರದೇಶದ ದೇಶಗಳ ಹಕ್ಕಿನ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾವು ನಾಳೆ ಪ್ರಶ್ನೆ ಮಾಡಲಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್, “ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಕಾನೂನುಬದ್ಧವಾಗಿದೆ. ಇದನ್ನು ಭಾರತ ಏಕಪಕ್ಷೀಯವಾಗಿ ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.























