ಪುತ್ತೂರು: ಎಜು-ಪಾರ್ಕ್ನಲ್ಲಿರುವ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 19ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
2019ರಲ್ಲಿ 18 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಸಂಸ್ಥೆಯು ಪವಿತ್ರ ಕುರ್ಆನ್ ಕಂಠಪಾಠದೊಂದಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 100ಕ್ಕೂ ಅಧಿಕ ವಿದ್ಯಾರ್ಥಿಗಳು ಹಿಫ್ಝುಲ್ ಕುರ್ಆನ್ ಜತೆಗೆ ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (ಎಸ್ಎನ್ಇಸಿ) ಪಠ್ಯಕ್ರಮದಡಿ ಸಮನ್ವಯ ಶಿಕ್ಷಣ ಪಡೆಯುತ್ತಿದ್ದಾರೆ. ಈವರೆಗೆ 30 ವಿದ್ಯಾರ್ಥಿಗಳು ಪವಿತ್ರ ಕುರ್ಆನ್ ಸಂಪೂರ್ಣ ಕಂಠಪಾಠ ಮಾಡಿ ಹಾಫಿಝ್ಗಳಾಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಾಲ್ಕು ಅಂತಸ್ತಿನ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಸುಸಜ್ಜಿತ ನೂತನ ಕಾಲೇಜು ಕಟ್ಟಡವನ್ನು ನಿರ್ಮಿಸಲಾಗಿದೆ.
ಸಯ್ಯದುಲ್ ಉಲಮಾ ಅವರಿಂದ ಉದ್ಘಾಟನೆ
ಸಮಸ್ತ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕುಂಬೋಳ್ ಸಯ್ಯದ್ ಅಲಿ ತಂಙಳ್ ದುವಾಆಶೀರ್ವಚನ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರೀಯ ನಾಯಕರಾದ ಶೈಖುನಾ ಎಂ.ಟಿ. ಉಸ್ತಾದ್, ಶೈಖುನಾ ಕೊಯ್ಯೋಡ್ ಉಸ್ತಾದ್, ಅಬ್ದುಲ್ ಸಲಾಂ ಬಾಖವಿ ಸೇರಿದಂತೆ ಸಮಸ್ತ ಕೇಂದ್ರ ಮುಶಾವರದ ಸದಸ್ಯರು ಭಾಗವಹಿಸಲಿದ್ದಾರೆ. ಎಸ್ಕೆಎಸ್ಎಸ್ಎಫ್ ಕೇಂದ್ರೀಯ ನಾಯಕರಾದ ಪಾಣಕ್ಕಾಡ್ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್, ಸತ್ತಾರ್ ಪಂದಲ್ಲೂರು ಮೊದಲಾದವರು ಉಪಸ್ಥಿತರಿರುವರು.
ಹಲವು ಗಣ್ಯರು ಭಾಗಿ
ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ. ಖಾದರ್, ಝಮೀರ್ ಅಹ್ಮದ್, ರಿಝಾನ್ ಅರ್ಶದ್, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರಹ್ಮಾನ್ ಖಾನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ಶಾಸಕ ಮಾಹಿನ್ ಹಾಜಿ ಕಲ್ಲಟ್ರ, ಮಾಜಿ ಶಾಸಕರಾದ ರಮಾನಾಥ ರೈ, ಸಂಜೀವ ಮರಂದೂರು ಸೇರಿದಂತೆ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಾಮಾಜಿಕ ಮುಖಂಡರಾದ ಝಕರಿಯಾ ಹಾಜಿ ಜೋಕಟ್ಟೆ, ಶರೀಫ್ ಹಾಜಿ ವೈಟ್ ಸ್ಪೋನ್, ಇನಾಯತ್ ಅಲಿ ಮುಲ್ಕಿ, ಯು.ಟಿ. ಇಫಿಕಾರ್, ಮುಸ್ತಫಾ ಭಾರತ್ ಸೇರಿದಂತೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿರುವರು.
5 ಸಾವಿರ ಮಂದಿಯ ನಿರೀಕ್ಷೆ
ಕಾರ್ಯಕ್ರಮದ ಯಶಸ್ಸಿಗಾಗಿ 313 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿವೆ. ನೂತನ ಕಾಲೇಜು ಕಟ್ಟಡ ಹಾಗೂ ಸಭಾಂಗಣವನ್ನು ಕಾರ್ಯಕ್ರಮಕ್ಕಾಗಿ ಸಜ್ಜುಗೊಳಿಸಲಾಗಿದೆ.
ಸುಮಾರು 5 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಪೋರ್ಟ್ವೆ, ಕೋಶಾಧಿಕಾರಿ ಉಮರ್ ಹಾಜಿ ಸಂಪ್ಯ, ದಾರುಲ್ ಹಸನಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಜುಬೈಲ್ ಘಟಕದ ಪೋಷಕ ಆಸಿಫ್ ಹಾಜಿ ದರ್ಬೆ ಹಾಗೂ ಆಡಳಿತ ಸಮಿತಿ ಸದಸ್ಯ ರಿಯಾಝ್ ಇಂಜಿನಿಯರ್ ಉಪಸ್ಥಿತರಿದ್ದರು.
























