ಪುತ್ತೂರು: ಜನರ ಪ್ರಯೋಜನಕ್ಕಾಗಿ ಪುತ್ತೂರು ಜಿಲ್ಲೆಯಾಗಬೇಕು, ವಿಟ್ಲ ತಾಲೂಕು ರಚನೆ ಆಗಬೇಕು. ಈ ಸಂಬಂಧ ಸರಕಾರಕ್ಕೆ ಮನವಿ ನೀಡಲಿದ್ದು, ಮನವಿಗೆ ಸ್ಪಂದಿಸದಿದ್ದರೆ ಬೇಡಿಕೆ ಈಡೇರುವವರೆಗೆ ಹೋರಾಟ ಮಾಡಲಿದ್ದೇವೆ ಎಂದು ಎಸ್.ಡಿ.ಪಿ.ಐ. ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಎ. ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಭೌಗೋಳಿಕ ಪ್ರದೇಶವಾಗಿದ್ದು ಬಹಳ ದೊಡ್ಡದಾಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ವಿಟ್ಲ ಸೇರಿ ಪುತ್ತೂರು ಜಿಲ್ಲೆಯಾಗಬೇಕು. ಅದೇ ರೀತಿ ವಿಟ್ಲ ತಾಲೂಕು ರಚನೆಯಾಗಬೇಕೆಂದು ನಮ್ಮ ಆಗ್ರಹ. ಇದು ರಾಜಕೀಯ ಲಾಭಕ್ಕಾಗಿ ಅಲ್ಲ. ಜನರ ಪ್ರಯೋಜನಕ್ಕಾಗಿ ಎಂದರು.
ಸುಳ್ಯ, ಅರಂತೋಡು ಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕಾದರೆ ಸುಮಾರು 100 ರಿಂದ 130 ಕಿ.ಮೀ ಪ್ರಯಾಣಿಸಬೇಕು. ಅಲ್ಲಿ ಹೋದಾಗ ಕೆಲಸ ಆಗದಿದ್ದರೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಸಿಗದಿದ್ದರೆ ಒಂದು ದಿನ ಪೂರ್ತಿ ವ್ಯರ್ಥ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿ ಪುತ್ತೂರಿನಲ್ಲಿ ಆಗಬೇಕೆಂದು ನಾವು ಸರಕಾರವನ್ನು ಒತ್ತಾಯಿಸುತ್ತೇವೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಅಗತ್ಯತೆಯನ್ನು ಮನಗಂಡು ವಿಟ್ಲ ತಾಲೂಕು ಅಗಿ ರಚನೆಯಾಗಬೇಕಾಗಿದೆ ಎಂದರು.
2007ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡುವ ಮೊದಲು ವಿಟ್ಲವನ್ನು ತಾಲೂಕು ಆಗಿ ಪರಿವರ್ತಿಸಬೇಕಾಗಿತ್ತು. ಸರಕಾರ ಮನಸ್ಸು ಮಾಡಿದರೆ ಇದೆಲ್ಲ ಸಾಧ್ಯವಿದೆ. 23 ಗ್ರಾಮಗಳು ಮತ್ತು ಸುಮಾರು ಒಂದೂವರೆ ಲಕ್ಷದಷ್ಟು ಜನರು ಈ ಭಾಗದಲ್ಲಿದ್ದಾರೆ. ಯಾಕಾಗಿ ಈ ಕುರಿತು ಸರಕಾರ ಗಮನಿಸುತ್ತಿಲ್ಲ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ನಾವು ರಾಜಕೀಯ ಲಾಭಕ್ಕಾಗಿ ಮಾತನಾಡುವುದಲ್ಲ. ಜನರ ಪ್ರಯೋಜನಕ್ಕಾಗಿ. ಈಗಾಗಲೇ ಸರಕಾರಕ್ಕೆ ಮತ್ತು ಸಂಬಂಧಿಸಿದವರಿಗೆ ಮನವಿ ನೀಡುತ್ತೇವೆ. ಮನವಿ ನೀಡಿದ ಬಳಿಕವೂ ಸ್ಪಂಧಿಸದಿದ್ದರೆ ನಿರಂತರ ಹೋರಾಟ ನಡೆಯಲಿದೆ ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಸದ್ದಾಂ ಮುರ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಪಿ ಉಪಸ್ಥಿತರಿದ್ದರು.






















