ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಜು.06) ಬಸ್ ಚಾಲಕ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.
ಚಿಂಚೋಳಿ ಕಾರ್ಯಚರಣೆಯಲ್ಲಿದ ಬಸ್ ಸಂಖ್ಯೆ ಕೆಎ 28 ಎಫ್-1985 ರಾತ್ರಿ ಕೊನೆಯ ಸುತ್ತಿನ ಕಾರ್ಯಾಚರಣೆ ಸಂದರ್ಭದಲ್ಲಿ ಹೆಡ್ ಲೈಟ್ ಮಂದಗತಿ ಇರುವ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ ಮಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ತಿಳಿಸಿದ್ದಾರೆ.
ಅಧಿಕಾರಿಗಳು ಚಿಂಚೋಳಿ ಘಟಕಕ್ಕೆ ಭೇಟಿ ನೀಡಿ ತಪಾಸಣೆ ವರದಿ ನೀಡಿದ್ದು, ಅದರಂತೆ ಬಸ್ಸಿಗೆ ಸರಿಯಾಗಿ ದುರಸ್ತಿ ಮಾಡದ ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಣೆ ಮಾಡದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ವಾಹನ ದುರಸ್ಥಿ ಮಾಡಿಸಿಕೊಳ್ಳದೆ ಅಜಾಗೂರಕತೆಯಿಂದ ವಾಹನ ಚಲಾಯಿಸಿದ ಚಾಲಕ ಆಕಾಶ್ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಇನ್ನು ಈ ರೀತಿಯ ಘಟನೆಗಳು ಮರು ಕಳಿಸದಂತೆ ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಮತ್ತು ಸಿಬ್ಬಂದಿಗಳಿಗೆ ಜಾಗೂರಕತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.




















