ಮದುವೆಗೆ ಸಿದ್ಧವಾಗಿದ್ದ ವಧುವಿಗೆ ವ್ಯಕ್ತಿಯೋರ್ವ ನೀಡಿದ ಕಿರುಕುಳದಿಂದ ಬೇಸತ್ತು ಮನೆಮಂದಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹಳೇಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ಮದುವೆ ಸಂಭ್ರಮದಲ್ಲಿ ಇರಬೇಕಾಗಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಮನೆ ಮಗಳ ಮದುವೆ ಸಂಭ್ರಮದಲ್ಲಿ ಮನೆ ತುಂಬಾ ಓಡಾಡಿಕೊಂಡು ಇರಬೇಕಾಗಿದ್ದ ಸಂಬಂಧಿಕರು ದುಃಖದಿಂದ ಬಿಕ್ಕಳಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ತಾಯಿ, ತಂದೆ ಹಾಗೂ ಮಗಳು ಡೆತ್ ನೋಟ್ ಬರೆದಿಟ್ಟು ಸೋಮವಾರ ಸಾವಿಗೆ ಶರಣಾಗಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಆತ್ಮಹತ್ಯೆಗೆ ಶರಣಾದ ಮೂವರು. ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬುವನಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡೆತ್ ನೋಟಿನಲ್ಲಿ ಬರೆದಿಡಲಾಗಿದೆ.
ರಕ್ಷಿತಾಗೆ ಮದುವೆ ನಿಶ್ಚಿಯವಾಗಿತ್ತು. ಆದರೆ ಉಲ್ಲಾಸ್ ಗೌಡನು ರಕ್ಷಿತಾ ಈ ಹಿಂದೆ ಕಳುಹಿಸಿದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಆರೋಪಿ ಉಲ್ಲಾಸ್ ಗೌಡನು ರಕ್ಷಿತಾ ಮದುವೆ ನಿಶ್ಚಿಯವಾಗಿದ್ದ ಯುವಕನಿಗೆ ಮೆಸೇಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ಧ. ಈ ಬೆಳವಣಿಗೆಯಿಂದ ಬೇಸತ್ತು ರಕ್ಷಿತಾ ಮತ್ತು ಆಕೆಯ ತಂದೆ-ತಾಯಿ ಗ್ರಾಮದ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳಕ್ಕೆ ಟಿ ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















