ಬೆಳ್ಳಾರೆ: ಕೆಲ ದಿನಗಳ ಹಿಂದೆ ಕುಣಿಗಲ್ ನಲ್ಲಿ ನಡೆದ ಅಪಘಾತದಲ್ಲಿ ಬೆಳ್ಳಾರೆ ನಿವಾಸಿ ಯಕ್ಷಗಾನ ಕಲಾವಿದ ವಾಸುದೇವ ರೈ ಅವರ ಪುತ್ರ ಸೂರಜ್ ರೈ ಅವರು ಮೇ 21ರಂದು ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸೂರಜ್ ರೈ ಅವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಸೂರಜ್ ರೈ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೂರಜ್ ರೈ ಅವರ ಇತ್ತೀಚೆಗಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಮೃತರು ಪತ್ನಿ ಸ್ನೇಹ, ತಂದೆ ಯಕ್ಷಗಾನ ಕಲಾವಿದ, ಸಂಘಟಕ, ಪ್ರಸಾದನ ಕಲಾವಿದ ವಾಸುದೇವ ರೈ ವಿ, ತಾಯಿ ಶರ್ಮಿಳಾ ರೈ, ಸಹೋದರ ಸುದೀಪ್ ರೈ ಅವರನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೃತದೇಹವನ್ನು ಬೆಳ್ಳಾರೆ ತರಲಿದ್ದಾರೆ. ನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.























