ಪುತ್ತೂರು: ಸೋಮವಾರ ಸಂಜೆ ಸುರಿದ ಭಾರೀ ಗಾಳಿ – ಮಳೆಗೆ ಕಬಕ ಗ್ರಾಮದಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಇದುವರೆಗೆ ಸರಿಯಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮೆಸ್ಕಾಂಗೆ ಕರೆ ಮಾಡಿ ವಿಚಾರಿಸಿದಾಗ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಆದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 2024ರಲ್ಲಿ ಕಬಕ ಗ್ರಾಮಕ್ಕೆ ಓರ್ವ ಲೈನ್ ಮ್ಯಾನ್ ಇದ್ದರು. ಆದರೆ ಈಗ ಕಬಕ ಕೊಡಿಪ್ಪಾಡಿ, ಪಡ್ನೂರು ಮೂರು ಗ್ರಾಮಗಳಿಗೆ ಓರ್ವ ಲೈನ್ ಮ್ಯಾನ್ ಇದ್ದಾರೆ. ಆದ್ದರಿಂದ ವಿದ್ಯುತ್ ಸಮಸ್ಯೆ ಬಹುವಾಗಿ ಕಾಡುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ ಅವರು ಪ್ರತಿಕ್ರಿಯಿಸಿ, ಭಾರಿ ಗಾಳಿ – ಮಳೆಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ತೀರಾ ಹಾನಿಯಾಗಿತ್ತು. ಅಲ್ಲಿಗೆ ಹೆಚ್ಚುವರಿ ಜನ ಕಳುಹಿಸಿ ರಿಪೇರಿ ಕಾರ್ಯ ಪೂರ್ಣಗೊಳಿಸಲಾಗಿದೆ. ಇದೀಗ ಇನ್ಸುಲೇಟರ್ ಗಳ ಕಾಮಗಾರಿ ನಡೆಯುತ್ತಿದೆ. ಲೈನ್ ಮ್ಯಾನ್ ಗಳು ಕೆಟ್ಟು ಹೋಗಿರುವ ಇನ್ಸುಲೇಟರ್’ಗಳನ್ನು ಬದಲಾಯಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ವಿದ್ಯುತ್ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ.





















