ಪುತ್ತೂರು: ಯಶಸ್ವಿ ಮೂರು ವರ್ಷಗಳನ್ನು ಪೂರೈಸಿರುವ ಎವಿಜಿ ಶಿಕ್ಷಣ ಸಂಸ್ಥೆಯು 2026 – 27ನೇ ಸಾಲಿನಲ್ಲಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಜೂನ್ 5 ಶುಕ್ರವಾರದಂದು ಈ ವರ್ಷದ ಆರಂಭೋತ್ಸವ ಕಾರ್ಯಕ್ರಮ ‘ಆರಂಭ 2026’ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಭಾಗವಹಿಸಲಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಸಂಸ್ಥಾಪಕರು, ಸಂಚಾಲಕರೂ ಆದ ಎ.ವಿ ನಾರಾಯಣ ಉಪಸ್ಥಿತರಿರುವರು ಎಂದು ತಿಳಿಸಿದರು.
ಜೂನ್ 5ರಂದು ಬೆಳಿಗ್ಗೆ 7 ಗಂಟೆಗೆ ಗಣ ಹೋಮ, ಸರಸ್ವತಿ ಪೂಜೆ ನಡೆದು 9.30ಕ್ಕೆ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಇರಲಿದೆ. ಬಳಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಜರುಗಲಿದೆ. ಆ ಬಳಿಕ ವೇದಿಕೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಕೃಷ್ಣನಗರ ಬಳಿಯ ಬನ್ನೂರು ಗ್ರಾಮದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯು, ಮೂರು ವರ್ಷಗಳ ಹಿಂದೆ ಕೇವಲ 30 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು. ಈ ಶಿಕ್ಷಣ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯು ಹೆಚ್ಚುತ್ತಾ ಹೋಗಿ ಈ ಶೈಕ್ಷಣಿಕ ವರ್ಷ ಅಂದರೆ 2026-27ರಲ್ಲಿ ಸುಮಾರು 200ಕ್ಕಿಂತ ಅಧಿಕ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹಳ್ಳಿ ಹಾಗೂ ಪಟ್ಟಣ ಎರಡನ್ನೂ ಒಳಗೊಂಡಿರುವ ಸುಂದರ ಹಸಿರು ಪರಿಸರದ ಮಧ್ಯದಲ್ಲಿ ಕಾರ್ಯಾಚರಿಸುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಬದುಕಿನ ಆರಂಭದಲ್ಲಿಯೇ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ನೀಡಿದ್ದಲ್ಲಿ ಬಲಿಷ್ಠ ಭಾರತ ನಿರ್ಮಾಣ ಮಾಡಬಲ್ಲ ಪ್ರಜೆಗಳು ಮೂಡಿಬರಲು ಸಾಧ್ಯ ಎಂಬ ಸಂಕಲ್ಪದೊಂದಿಗೆ Foster bharateeya values ಎಂಬ ಧೈಯದೊಂದಿಗೆ ಈ ಶಿಕ್ಷಣ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲಾಡಳಿತ ಮಂಡಳಿ ಕಾರ್ಯ ಪ್ರವೃತ್ತವಾಗಿದೆ. ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ ಮತ್ತು ಮಾನವೀಯತೆಯ ಜಾಗೃತಿಗಳ ಜೊತೆಗೆ ‘ರಾಷ್ಟ್ರ ಮೊದಲು’ ಎಂಬ ಮೌಲ್ಯವನ್ನು ಎಳವೆಯಲ್ಲಿಯೇ ಮಕ್ಕಳಿಗೆ ನೀಡುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ವಿದ್ಯಾಭಾರತಿ ಕರ್ನಾಟಕದ ಜೊತೆ ಜೋಡಣೆಯಾಗಿರುವ ಎವಿಜಿ ಶಿಕ್ಷಣ ಸಂಸ್ಥೆಯಲ್ಲಿ ಭಾರತದ ಸಂವಿಧಾನ ಪೀಠಿಕೆ ವಾಚನ, ಯೋಗ, ಕ್ರೀಡೆ, ಸಂಗೀತ, ಯಕ್ಷಗಾನ, ಕರಾಟೆ, ಭರತನಾಟ್ಯ, ಚಿತ್ರಕಲೆ, ಅಬಾಕಸ್ ಚಟುವಟಿಕೆಗಳ ಜೊತೆ ಭಜನೆ, ಸಂಸ್ಕೃತ ಶ್ಲೋಕ ಪಠಣಗಳನ್ನು ಪಠ್ಯದೊಂದಿಗೆ ಕಲಿಸಲಾಗುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ, ಉಪಾಧ್ಯಕ್ಷ ಉಮೇಶ್ ಮಳುವೇಳು, ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಮುಖ್ಯಶಿಕ್ಷಕ ಅಮರನಾಥ್ ಬಿ.ಪಿ. ಉಪಸ್ಥಿತರಿದ್ದರು.






















