ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದ ಆಶ್ರಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಾರಂಗ ತಂಡದ ಸಾರಥ್ಯದಲ್ಲಿ ಅರ್ಧ ಏಕಾಹ ಭಜನೆ ಏ. 26ರಂದು ಬೆಳಿಗ್ಗೆ 6.30ರಿಂದ ಸಂಜೆ 6.30ರವರೆಗೆ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮಾತನಾಡಿ, ಮಕ್ಕಳು ಮೊಬೈಲಿನಲ್ಲಿ ಬ್ಯುಸಿ, ಹೆಣ್ಣು ಮಕ್ಕಳು ಧಾರವಾಹಿಯಲ್ಲಿ ಬ್ಯುಸಿ, ಗಂಡಸರು ಕೆಲಸದಲ್ಲಿ ಬ್ಯುಸಿ. ಹೀಗಿರುವಾಗ ಸಮಾಜವನ್ನು ಭಜನೆ ಮೂಲಕ ಧಾರ್ಮಿಕತೆಯೆಡೆಗೆ, ಸಂಸ್ಕೃತಿಯೆಡೆಗೆ ಕೊಂಡೊಯ್ಯಬೇಕೆಂಬ ಶಾರಂಗ ತಂಡದ ಕಾರ್ಯ ಶ್ಲಾಘನೀಯ. ಶಾರಂಗ ಎಂದರೆ ಕೃಷ್ಣ ಅಥವಾ ವೆಂಕಟರಮಣ ದೇವರ ಬಿಲ್ಲು. ವಿಷ್ಣುವನ್ನು ಶಾರಂಗ ಪಾಣಿ ಎಂದೇ ಕರೆಯುತ್ತಾರೆ. ಒಂದು ಗುರಿ ಇಟ್ಟುಕೊಂಡು ರಚಿತವಾದ ಶಾರಂಗ ತಂಡ, ಸಾಮಾಜಿಕ, ಧಾರ್ಮಿಕ ಕಾರ್ಯಗಳ ಉದ್ದೇಶದೊಂದಿಗೆ ಹಿಂದೂ ಸಮಾಜದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.

1200 ವರ್ಷಗಳ ಹಿಂದೆಯೇ ಆದಿಶಂಕರಾಚಾರ್ಯರು ಭಜಗೋವಿಂದಂ ಭಜಗೋವಿಂದ ಎಂದು ಹೇಳಿದ್ದರು. ಅಂದರೆ ಭಜನೆ ಮಾಡಿರೆಂದು ಅರ್ಥ. ಭಗವಂತ ಎಲ್ಲಿದ್ದಾನೆ ಎಂದು ನಾರದ ಋಷಿಗಳು ಭಗವಂತ ವಿಷ್ಣುವಿನಲ್ಲಿ ಕೇಳಿದಾಗ– ವೈಕುಂಠದಲ್ಲಿ ಇರದೇ ಇದ್ದರೂ, ಯೋಗಿಗಳ- ಉಪಾಸಕರ ಹೃದಯದಲ್ಲಿ ಇರದೇ ಇದ್ದರೂ, ಭಕ್ತರು ನಡೆಸುವ ಭಜನೆಯಲ್ಲಿ ಖಂಡಿತಾ ತಾನಿದ್ದೇನೆ ಎಂದು ಹೇಳಿದ್ದಾನೆ. ಹಾಗಾಗಿ ಶಾರಂಗ ತಂಡ ಇಂದು ಆಯೋಜಿಸಿದ ಅರ್ಧ ಏಕಾಹ ಭಜನೆ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಂತಹ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತೇವೆ ಎಂದರು.
ಮುಖ್ಯಅತಿಥಿಯಾಗಿದ್ದ ಯು.ಆರ್. ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ, ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎಂದು ಹಿರಿಯರು ಹೇಳಿದ್ದಾರೆ. ಇಂತಹ ಮಾತನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವ ಶಾರಂಗ ತಂಡದ ಕಾರ್ಯ ಅಭಿನಂದನೀಯ ಎಂದರು.
ದುರ್ಗಾಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲಕ ಶಿವಾಜಿ ಸುರ್ವೆ ಮುಖ್ಯ ಅತಿಥಿಗಳಾಗಿದ್ದರು. ಪೋಳ್ಯ ಮಠ ಆಡಳಿತ ಸಮಿತಿ ಅಧ್ಯಕ್ಷ ಉಮಾಶಂಕರ ಎದುರ್ಕಳ, ಪೋಳ್ಯ ಮಠದ ಅರ್ಚಕ ವೇದಮೂರ್ತಿ ಸತ್ಯನಾರಾಯಣ್ ಭಟ್, ಶಾರಂಗ ತಂಡದ ಸಂಚಾಲಕ ರಮೇಶ್ ಪದೆಂಜಾರು ಉಪಸ್ಥಿತರಿದ್ದರು.
ಶಾರಂಗ ತಂಡದ ಆದಿತ್ಯ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಚಾಲಕರಾದ ಕಾರ್ತಿಕ್, ಅಶ್ವಥ್ ಸಹಕರಿಸಿದರು.
ಅರ್ಧ ಏಕಾಹ ಭಜನೆ, ಧಾರ್ಮಿಕ ಕಾರ್ಯಕ್ರಮ:
ಬೆಳಿಗ್ಗೆ 6 ಗಂಟೆಗೆ ಪೋಳ್ಯ ಮಠದ ಅರ್ಚಕ ವೇದಮೂರ್ತಿ ಸತ್ಯನಾರಾಯಣ್ ಭಟ್ ಅವರು ದೀಪೋಜ್ವಲನೆ ಮಾಡುವ ಮೂಲಕ ಅರ್ಧ ಏಕಾಹ ಭಜನೆಯನ್ನು ಉದ್ಘಾಟಿಸಲಾಯಿತು. ಬೆಳಿಗ್ಗೆ 6.30ಕ್ಕೆ ಆರಂಭವಾದ ಭಜನೆ ಸಂಜೆಯವರೆಗೆ ನಿರಂತರವಾಗಿ ನಡೆಯಿತು. ಬೆಳಿಗ್ಗೆ ಗಣಪತಿ ಹವನ, ಮದ್ಯಾಹ್ನ ಮಹಾಪೂಜೆ, ಅನ್ನಪ್ರಸಾದ ಹಾಗೂ ಸಂಜೆ ಧಾರ್ಮಿಕ ಕಾರ್ಯಕ್ರಮ ಜರಗಿತು. ತಾಲೂಕಿನ ವಿವಿಧೆಡೆಗಳಿಂದ 11 ಭಜನಾ ತಂಡ ಭಾಗವಹಿಸಿತ್ತು.
ನೂತನ ತಂಡ:
ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ನೂತನ ತಂಡ ಅಸ್ತಿತ್ವಕ್ಕೆ ಬಂದಿದ್ದು, ಶಾರಂಗ ಎಂದು ಹೆಸರಿಡಲಾಗಿದೆ. ಟೀಮ್ ವಿತ್ ಏಮ್ ಎಂಬ ಧ್ಯೇಯವಾಕ್ಯದಂತೆ ಕಾರ್ಯನಿರ್ವಹಿಸಲಿರುವ ಈ ತಂಡ ಮೊದಲ ಕಾರ್ಯಕ್ರಮವಾಗಿ ಅರ್ಧ ಏಕಾಹ ಭಜನೆಯನ್ನು ಆಯೋಜಿಸಿದ್ದು, ಶ್ಲಾಘನೆಗೆ ಪಾತ್ರವಾಗಿದೆ.





















