ಪುತ್ತೂರು: ಗುರುಸೇವಾ ಪರಿಷತ್ ಪುತ್ತೂರು ಮಂಡಲದ ತಿಂಗಳ ಸಭೆ ಹಾಗೂ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತದ ಆಮಂತ್ರಣ ಬಿಡುಗಡೆ ಸಮಾರಂಭ ಗುರುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.

ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಅವರ ಆಪ್ತ ಸಹಾಯಕ ಲೋಲಾಕ್ಷ ಆಚಾರ್ಯ ಮಾತನಾಡಿ, ಗುರುಗಳ 50ನೇ ಜನ್ಮ ವರ್ಷಾಚರಣೆ ಅಂಗವಾಗಿ ಒಂದು ವರ್ಷಗಳ ಪರ್ಯಂತ 50 ಕಾರ್ಯಕ್ರಮ ಮಾಡಬೇಕು ಎಂಬ ಸಂಕಲ್ಪ ಇದೆ. ಅದೇ ರೀತಿ ಬಾಲಸರಸ್ವತಿ ಪೂಜೆ ನಡೆಸಲು ಉದ್ದೇಶಿಸಲಾಗಿದೆ. ಸಮಾಜದಲ್ಲಿ ಐಕ್ಯಮತ್ಯ, ಮಕ್ಕಳಿಗೆ ಉತ್ತಮ ಬುದ್ಧಿ ಬೆಳೆಯುವ ಉದ್ದೇಶ. ಕೊನೆಯಲ್ಲಿ ಐಕ್ಯಮತ್ಯ ಹೋಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಕೆಮ್ಮಣ್ಣಗುಂಡಿ ಮಾತನಾಡಿ, ನಮ್ಮ ಧರ್ಮದ ಆಚರಣೆಯನ್ನು ಬಿಡಬೇಡಿ. ಮುಂದೊಂದು ದಿನ ಸಮಸ್ಯೆ ಎದುರಾಗುವುದು ಅಪ್ಪ – ಅಮ್ಮನಿಗೆ. ಹಾಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ನಮ್ಮ ಸಮಾಜದ, ಧರ್ಮದ ಬಗ್ಗೆ ತಿಳಿಹೇಳುವ ಕೆಲಸ ಆಗಬೇಕಾಗಿದೆ. ಇಂದು ನಮ್ಮ ಸಮುದಾಯದ ಕೆಲ ಸಂಪ್ರದಾಯಗಳನ್ನು ಬಿಟ್ಟು, ಬೇರೆ ಸಮುದಾಯದ ಸಂಪ್ರದಾಯಗಳನ್ನು ಅನುಸರಿಸುವುದನ್ನು ಕಾಣುತ್ತೇವೆ. ಇದು ಸರಿಯಲ್ಲ. ನಮ್ಮ ಸಮುದಾಯದ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವವಿದೆ. ಒಂದು ವೇಳೆ ನಾವು ಹಿನ್ನೆಲೆ ತಿಳಿಯದೇ ಇನ್ನೊಂದು ಸಮುದಾಯದ ಆಚರಣೆಯೊಂದನ್ನು ಪಾಲಿಸಿದರೆ, ಆ ಆಚರಣೆಯ ನಿಜವಾದ ತತ್ವ ಪಾಲನೆ ಆಗುವುದಿಲ್ಲ ಎಂದರು.
ವಿಶ್ವೇಶ್ವರ ಪುರೋಹಿತ್ ಬಾಳಿಲ ಮಾತನಾಡಿ, ಗುರು ಎಂದರೆ ಏನು ಎಂಬ ವಿಚಾರ ನಮಗೆ ಗೊತ್ತಿಲ್ಲ. ಗುರುಗಳ ದರ್ಶನ ಪಡೆಯದ ಜನರು ಎಷ್ಟೋ ಇದ್ದಾರೆ. ಆದ್ದರಿಂದ ಪಡುಕುತ್ಯಾರು ಮಠಕ್ಕೆ ಪ್ರತಿಯೊಬ್ಬರು ಭೇಟಿ ನೀಡಬೇಕು. ಕಳೆದ 100 ವರ್ಷಗಳಲ್ಲಿ ನಮ್ಮ ಸಮಾಜಕ್ಕೆ ಗುರು ಪೀಠ ಇರಲಿಲ್ಲ. ಈಗ ನಮಗೆ ಗುರುಪೀಠವನ್ನು, ಗುರುಗಳನ್ನು ನೋಡುವ ಭಾಗ್ಯ ಸಿಕ್ಕಿದೆ. ಗುರುಗಳು ಸಮಾಜಕ್ಕಾಗಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. ವೈದಿಕರು ನಡೆಸುವ ಪೂಜೆಯೂ ಪರಿಪೂರ್ಣ ಆಗಬೇಕಾದರೂ ಗುರುಗಳ ಮಂತ್ರಾಕ್ಷತೆ ಸಿಗಲೇಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರು ಸೇವಾ ಪರಿಷತ್ ಪುತ್ತೂರು ಮಂಡಲ ಅಧ್ಯಕ್ಷ ವಿ. ಪುರುಷೋತ್ತಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಷ ಗುರುಗಳಿಗೆ 50ನೇ ವರ್ಷ. ಇದರ ವರ್ಷಾಚರಣೆಗೆ ಗುರುಗಳು ನಿರಾಕರಿಸಿದ್ದಾರೆ. ಅದರ ಬದಲು ದೇವಸ್ಥಾನದಲ್ಲಿ 50 ಕಾರ್ಯಕ್ರಮ ನಡೆಸುವ ಬಗ್ಗೆ ಆಲೋಚಿಸಲಾಗಿದೆ ಎಂದರು.
ಶೋಭಾ ಪ್ರಾರ್ಥಿಸಿದರು. ಕೋಶಾಧಿಕಾರಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಗುರುಗಳಿಗೆ ಅರ್ಪಿಸಲು ಸಿದ್ಧಪಡಿಸಿದ ಕೂರ್ಮಾಸನವನ್ನು ವೀಕ್ಷಣೆಗೆ ಇಡಲಾಯಿತು.






















