ಪುತ್ತೂರು: ನೀಟ್ ಪ್ರಶ್ನಾಪತ್ರಿಕೆ ಲೀಕ್ ಆಗಿರುವುದರಿಂದ ನಮ್ಮ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಪರೀಕ್ಷೆ ಬರೆದ ಸುಮಾರು 10ರಿಂದ 12 ಸಾವಿರದಷ್ಟು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟಾ ಅವರು ಮೌನವಾಗಿರುವುದೇಕೆ? ವಿದ್ಯಾರ್ಥಿಗಳ ಕಣ್ಣೀರು ಸಂಸದರಿಗೇಕೆ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಪ್ರಶ್ನಿಸಿದ್ದಾರೆ.

ದೇಶದಲ್ಲಿ ನೀಟ್ ಪ್ರಶ್ನಾ ಪತ್ರಿಕೆ ಲೀಕ್ ಆದ ಹಿನ್ನೆಲೆಯಲ್ಲಿ ಜಂತರ್ ಮಂತರ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇದು ದೆಹಲಿಯ ವಿಷಯ, ಉತ್ತರ ಭಾರತದ ವಿಷಯ ಎಂದು ನಾವು ಸುಮ್ಮನಾಗುವಂತಿಲ್ಲ. ಯಾಕೆಂದರೆ ನಮ್ಮ ಮನೆ ಮಕ್ಕಳು, ನಮ್ಮ ಊರಿನ ಮಕ್ಕಳು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸುಮಾರು 12 ಸಾವಿರದಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು, ಅವರ ಭವಿಷ್ಯದ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ವಿದ್ಯಾರ್ಥಿಗಳು, ದೇಶದಲ್ಲಿ 24 ಲಕ್ಷದಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 22 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ತಕ್ಷಣವೇ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟಾ ಅವರು ಮಧ್ಯಪ್ರವೇಶಿಸಿ, ಸರಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಅಹಿಂಸಾತ್ಮಕ ಹೋರಾಟಕ್ಕೆ ದಮನಕಾರಿ ನೀತಿ ಖಂಡನೀಯ:
ನೀಟ್ (NEET) ಪರೀಕ್ಷೆಯ ಬೃಹತ್ ಅಕ್ರಮ ಹಾಗೂ ಹಗರಣದ ವಿರುದ್ಧ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರು ಕಳೆದ 25 ದಿನಗಳಿಂದ ಸತತವಾಗಿ ಆಹಾರ / ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಈ ಸತ್ಯಾಗ್ರಹದ ಮಧ್ಯದಿಂದ ದೆಹಲಿ ಪೊಲೀಸ್ ಹೈಕೋರ್ಟ್ ಆದೇಶದಿಂದ ಅವರನ್ನು ಬಟ್ಟೆ ಮುಚ್ಚಿ. ಪ್ರತಿಭಟನೆ ಮಧ್ಯದಿಂದ ಕೇವಲ 30 ನಿಮಿಷದಲ್ಲಿ ಸೋನಂ ವಾಂಗ್ಚುಕ್ವರನ್ನು ಕರೆದುಕೊಂಡು ಹೋಗಿರುತ್ತಾರೆ. ಅಲ್ಲದೇ ಅವರ ಪತ್ನಿಗೆ ಸಹ ಅವರೊಂದಿಗೆ ಮಾತನಾಡಲು ಪೊಲೀಸರು ಅವಕಾಶ ನೀಡದಿರುವುದು ಸರ್ಕಾರದ ಅತ್ಯಂತ ದೊಡ್ಡ ಮಟ್ಟದ ಅಮಾನವೀಯ ನಡೆಯಾಗಿದೆ. ಪೊಲೀಸರ ಲಾಠಿಚಾರ್ಜ್ ಹಾಗೂ ದೌರ್ಜನ್ಯದಿಂದ 150ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ತೀವ್ರ ಗಾಯಗಳಾಗಿವೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಹೀಗೆ ಸತ್ಯಾಗ್ರಹಿಗಳನ್ನು ರಹಸ್ಯವಾಗಿ ಕರೆದುಕೊಂಡು ಹೋಗಿರುವುದನ್ನು ಗಮನಿಸಿದರೆ ಇದರ ಹಿಂದೆ ಕೇಂದ್ರ ಸರ್ಕಾರದ ಯಾವುದೋ ಅಪಾಯಕಾರಿ ಹಾಗೂ ಗುಪ್ತಕರವಾದ ಆಲೋಚನೆ ಇದೆಯೇ? ಎಂಬುವ ಸಂಸ್ಥೆಯ ಮೂಡುತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಕೇಂದ್ರ ಸರ್ಕಾರ ಪೊಲೀಸರ ಲಾಟಿಗೆ ಮೊಳೆ ಹಾಕಿ ವಿದ್ಯಾರ್ಥಿ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ನೀಟ್ ಪರೀಕ್ಷೆಯ ಬೃಹತ್ ಹಗರಣ ಜರುಗಿದ್ದರೂ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಂತಿರುವುದು ನಾಚಿಕೆಗೇಡು. ದೇಶದ ಇತಿಹಾಸದಲ್ಲೇ ಪ್ರಮುಖ ನಾಯಕರು ಸಣ್ಣ ಆರೋಪ ಬಂದಾಗಲೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಉದಾಹರಣೆಗಳಿವೆ (1962ರಲ್ಲಿ ವಿ. ಕೆ. ಕೃಷ್ಣಮೇನನ್, 1996ರಲ್ಲಿ ಎಲ್. ಕೆ. ಅಡ್ವಾಣಿ, 2005ರಲ್ಲಿ ಕೆ. ನಟವರ್ ಸಿಂಗ್, 2010ರಲ್ಲಿ ಎ. ರಾಜಾ ಹಾಗೂ ಸುರೇಶ್ ಕಲ್ಮಾಡಿ, 2018ರಲ್ಲಿ ಎಂ. ಜೆ. ಅಕ್ಬರ್). ಇಷ್ಟೆಲ್ಲಾ ನಾಯಕರು ರಾಜೀನಾಮೆ ಕೊಟ್ಟಿರುವಾಗ, ಇಂದು ನೀಟ್ ಹಗರಣದ ಮುಖ್ಯ ಹೊಣೆ ಹೊರಬೇಕಾದ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಖಂಡಿಸಿದ್ದಾರೆ.
ಯಾವುದೇ ಜನಪರ ಪ್ರತಿಭಟನೆಗಳು ನಡೆದರೂ ಯಾರನ್ನೂ ಕೇರ್ ಮಾಡದೆ ಲಾಠಿ ಬೀಸುವುದು ಮತ್ತು ಕೋಮುವಾದಿ ತಂತ್ರಗಳ ಮೂಲಕ ರಾಜಕೀಯ ಮಾಡುವುದು ಸರ್ಕಾರದ ನಿತ್ಯ ಕಾಯಕವಾಗಿದೆ. ಇನ್ನು ಮುಂದೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ನೈಜ ಅಭಿವೃದ್ಧಿಯಾಗಬೇಕು. ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡದಿದ್ದರೆ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಇಬ್ರಾಹಿಂ ಗೋಳಿಕಟ್ಟೆ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.























