ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಕನ್ನಡ ಭಾಷಾ ವಿಭಾಗ ಹಾಗೂ ಅದ್ವಯ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ಮನದ ಮಾತು–ಕವಿತೆಯ ಹಾದಿ’ ಕವನ ಕಮ್ಮಟ ಹಾಗೂ ಸಾಹಿತ್ಯ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ಪ್ರಾಧ್ಯಾಪಕರಾದ ಡಾ. ರಾಜೇಶ್ ಬೆಜ್ಜಂಗಳ ಮಾತನಾಡಿ, ಹಳೆಗನ್ನಡ, ಚಂಪೂ ಕಾವ್ಯ ಹಾಗೂ ನವ ಸಾಹಿತ್ಯದ ಕುರಿತು ಸವಿಸ್ತಾರವಾಗಿ ವಿವರಿಸಿದರು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಬರವಣಿಗೆಯಿಂದ ಜ್ಞಾನ ವೃದ್ಧಿಯಾಗುವುದಲ್ಲದೆ, ಜೀವನಪರ್ಯಂತ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಮಾತನಾಡಿ, ಮನುಷ್ಯನ ಬದುಕಿನ ನೋವು-ನಲಿವುಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಿದಾಗ ಅದು ಸಾಹಿತ್ಯವಾಗುತ್ತದೆ. ಕವನ ರಚನೆಯ ಮೂಲಭೂತ ಅಂಶಗಳನ್ನು ಪರಿಚಯಿಸುವ ಈ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಸಾಹಿತ್ಯವು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಇಂತಹ ವೇದಿಕೆಗಳ ಸದುಪಯೋಗದಿಂದ ವಿದ್ಯಾರ್ಥಿಗಳ ಪ್ರತಿಭೆಗಳು ಅನಾವರಣಗೊಳ್ಳುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕವನ ರಚನೆ ಹಾಗೂ ಅನುಭವ ಕಥನ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಆಂತರಿಕ ಭರವಸೆ ಗುಣಮಟ್ಟ ಕೋಶದ ಸಂಯೋಜಕಿ ರಶ್ಮಿ ಹಾಗೂ ಅದ್ವಯ ಸಾಹಿತ್ಯ ಸಂಘದ ಕಾರ್ಯದರ್ಶಿ ದಾಮಿನಿ ಉಪಸ್ಥಿತರಿದ್ದರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಹರಿಶ್ಚಂದ್ರ ಸಿ. ಪ್ರಸ್ತಾವನೆ ಮಾಡಿದರು. ವಿದ್ಯಾರ್ಥಿನಿಯರಾದ ವೀಕ್ಷಾ (ದ್ವಿತೀಯ ಬಿಸಿಎ) ಮತ್ತು ಸೃಷ್ಟಿ (ತೃತೀಯ ಬಿಸಿಎ) ಪ್ರಾರ್ಥನೆಗೈದರು. ಹರಿಪ್ರಸಾದ್ (ತೃತೀಯ ಬಿಎ) ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ರಶ್ಮಿತಾ ಸ್ವಾಗತಿಸಿ, ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಅಮೃತ್ ರಾಜ್ ವಂದಿಸಿದರು. ಗ್ರೀಷ್ಮ (ದ್ವಿತೀಯ ಬಿ.ಕಾಂ) ಕಾರ್ಯಕ್ರಮ ನಿರೂಪಿಸಿದರು.























