tamanvi
ಸ್ಥಳೀಯ

ಇ-ಸ್ವತ್ತು 2.0 ತಂತ್ರಾಂಶದಿಂದ 11ಎ, 11ಬಿ ಅರ್ಜಿ ವಿಲೇವಾರಿ ವಿಳಂಬ: ಸರ್ಕಾರದ ಗಮನ ಸೆಳೆದ ಕಿಶೋರ್ ಕುಮಾರ್ ಪುತ್ತೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ನಮೂನೆ 11ಎ ಹಾಗೂ 11ಬಿ ಪ್ರಕ್ರಿಯೆಗಳು ಇ-ಸ್ವತ್ತು 2.0 ತಂತ್ರಾಂಶ ಜಾರಿಯಾದ ಬಳಿಕ ವಿಳಂಬವಾಗುತ್ತಿರುವ ವಿಚಾರ ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಬಂದಿದೆ.
ಶಾಸಕರು ಚುಕ್ಕಿ ಗುರುತಿನ ಪ್ರಶ್ನೆ ಸಂಖ್ಯೆ 410 ಹಾಗೂ ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ 408ರ ಮೂಲಕ ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಸರ್ಕಾರದ ಉತ್ತರದ ಪ್ರಕಾರ, 2025ರ ಡಿಸೆಂಬರ್ 1ರಿಂದ ಇ-ಸ್ವತ್ತು 2.0 ಮೂಲಕ ನಮೂನೆ 11ಎಗೆ ಸಂಬಂಧಿಸಿದಂತೆ ಒಟ್ಟು 1,84,222 ಅರ್ಜಿಗಳು ಸ್ವೀಕೃತವಾಗಿದ್ದು, 1,53,795 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 639 ಅರ್ಜಿಗಳು ತಿರಸ್ಕೃತವಾಗಿದ್ದು, 23,802 ಅರ್ಜಿಗಳು ಇನ್ನೂ ಅನುಮೋದನೆಗೆ ಬಾಕಿ ಉಳಿದಿವೆ.
ತಿರಸ್ಕೃತ ಅರ್ಜಿಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 253 ಹಾಗೂ ಉಡುಪಿ ಜಿಲ್ಲೆಯಲ್ಲಿ 55 ಅರ್ಜಿಗಳಿವೆ. ದಕ್ಷಿಣ ಕನ್ನಡದಲ್ಲಿ ಉಳ್ಳಾಲ ತಾಲೂಕಿನಲ್ಲಿ 57 ಹಾಗೂ ಉಡುಪಿಯಲ್ಲಿ ಕಾರ್ಕಳದಲ್ಲಿ 35 ಅರ್ಜಿಗಳು ತಿರಸ್ಕೃತವಾಗಿವೆ.
ಇನ್ನು ನಮೂನೆ 11ಬಿಗೆ ಸಂಬಂಧಿಸಿದಂತೆ ಒಟ್ಟು 15,936 ಅರ್ಜಿಗಳು ಸಲ್ಲಿಕೆಯಾಗಿದ್ದು, 5,151 ಅರ್ಜಿಗಳಿಗೆ ಅನುಮೋದನೆ ದೊರೆತಿದೆ. 8,892 ಅರ್ಜಿಗಳು ಇನ್ನೂ ಅನುಮೋದನೆಗೆ ಬಾಕಿ ಉಳಿದಿವೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65 ಹಾಗೂ ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ಬಾಕಿ ಇರುವುದಾಗಿ ಸರ್ಕಾರ ತಿಳಿಸಿದೆ.
ಹೆಚ್ಚುವರಿ ಅನುಮೋದನಾ ಹಂತದಿಂದ ವಿಳಂಬ
ಇ-ಸ್ವತ್ತು 2.0 ಜಾರಿಗೆ ಮುನ್ನ ನಮೂನೆ 9 ಮತ್ತು 11ಎ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರ ಅನುಮೋದನೆಯೇ ಪ್ರಮುಖವಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ (EO) ಅವರ ಅನುಮೋದನೆಯನ್ನೂ ಕಡ್ಡಾಯಗೊಳಿಸಿರುವುದರಿಂದ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅದೇ ರೀತಿ ನಮೂನೆ 11ಬಿ ಪ್ರಕ್ರಿಯೆಯಲ್ಲೂ ಈ ಹಿಂದೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಅನುಮೋದನೆ ನೀಡುವ ವ್ಯವಸ್ಥೆ ಇತ್ತು. ಇದೀಗ ಅನುಮೋದನಾ ಅಧಿಕಾರವನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಸಾರ್ವಜನಿಕರು ಸಣ್ಣಪುಟ್ಟ ಆಸ್ತಿ ಸಂಬಂಧಿತ ಕೆಲಸಗಳಿಗೂ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಕಚೇರಿಗಳನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ 11ಎಗೆ ಸಂಬಂಧಿಸಿದ ಹೆಚ್ಚುವರಿ EO ಅನುಮೋದನೆ ಹಾಗೂ 11ಬಿಗೆ ಸಂಬಂಧಿಸಿದ ಹೆಚ್ಚುವರಿ CEO ಅನುಮೋದನಾ ಹಂತವನ್ನು ಕೈಬಿಟ್ಟು, ಹಿಂದಿನಂತೆ ಗ್ರಾಮ ಪಂಚಾಯತಿಯ PDO ಮಟ್ಟದಲ್ಲಿಯೇ ಅಗತ್ಯ ಪರಿಶೀಲನೆ ಮತ್ತು ಅನುಮೋದನೆ ನೀಡುವ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಲಾಗಿದೆ.
ಅರ್ಜಿ ಟ್ರ್ಯಾಕಿಂಗ್ ವ್ಯವಸ್ಥೆಯ ಕೊರತೆ
ನಾಗರಿಕರ ಲಾಗಿನ್ ಮೂಲಕ ಇ-ಖಾತೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ, ಅರ್ಜಿ ಪ್ರಸ್ತುತ ಯಾವ ಅಧಿಕಾರಿಯ ಲಾಗಿನ್‌ನಲ್ಲಿದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಲು ಸಮರ್ಪಕ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲ. ಅರ್ಜಿ ತಿರಸ್ಕೃತವಾದ ಸಂದರ್ಭದಲ್ಲಿ ತಿರಸ್ಕಾರದ ಕಾರಣವನ್ನು ನಾಗರಿಕರ ಲಾಗಿನ್‌ನಲ್ಲಿ ಸ್ಪಷ್ಟವಾಗಿ ತಿಳಿಸುವ ವ್ಯವಸ್ಥೆಯೂ ಇಲ್ಲ ಎಂಬ ಆರೋಪವಿದೆ.
ಪೇಪರ್‌ಲೆಸ್ ವ್ಯವಸ್ಥೆ ಕೇವಲ ಘೋಷಣೆಗೆ ಸೀಮಿತ?
ಇ-ಸ್ವತ್ತು 2.0 ಅನ್ನು ಸಂಪೂರ್ಣ ಪೇಪರ್‌ಲೆಸ್ ವ್ಯವಸ್ಥೆ ಎಂದು ಸರ್ಕಾರ ಘೋಷಿಸಿದ್ದರೂ, ಅರ್ಜಿದಾರರಿಂದ ಇನ್ನೂ ಭೌತಿಕವಾಗಿ ಕಡತಗಳನ್ನು ಸಲ್ಲಿಸುವಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಮಟ್ಟದಿಂದ ಸೂಚಿಸಲಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು 2025ರನ್ವಯ ನಮೂನೆ 11ಎ ಅಥವಾ 11ಬಿ ವಿತರಿಸಲು ಒಟ್ಟು 15 ಕರ್ತವ್ಯದ ದಿನಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಈ ಅವಧಿಯ ಬಳಿಕ ಅರ್ಜಿ ಸ್ವಯಂಚಾಲಿತವಾಗಿ ಮುಂದಿನ ಹಂತಕ್ಕೆ ವರ್ಗಾವಣೆ ಅಥವಾ ‘Deemed Approved’ ಆಗುವ ವ್ಯವಸ್ಥೆ ಇರಬೇಕಾದರೂ, ಈ ಪ್ರಕ್ರಿಯೆ ಇ-ಸ್ವತ್ತು 2.0ನಲ್ಲಿ ಇನ್ನೂ ಸಕ್ರಿಯವಾಗಿಲ್ಲ ಎಂದು ಆರೋಪಿಸಲಾಗಿದೆ.
ತಾಂತ್ರಿಕ ಸಮಸ್ಯೆಗಳೂ ಹೆಚ್ಚಳ
ಇ-ಸ್ವತ್ತು 2.0ನಲ್ಲಿ ಸಣ್ಣಪುಟ್ಟ ತಪ್ಪುಗಳಿರುವ ಅರ್ಜಿಗಳನ್ನು ಮುಂದಿನ ಹಂತದಲ್ಲೇ ತಿದ್ದುಪಡಿ ಮಾಡಲು ಅವಕಾಶವಿಲ್ಲದಿರುವುದು, ಸರ್ವರ್ ನಿಧಾನಗತಿ, ಹ್ಯಾಂಗ್ ಅಥವಾ ಡೌನ್ ಆಗುವುದು, ಹಳೆಯ ಆಸ್ತಿ ದಾಖಲೆಗಳು ಸರಿಯಾಗಿ ಪ್ರದರ್ಶಿಸದಿರುವುದು, ದಾಖಲೆಗಳ ಅಪ್‌ಲೋಡ್‌ನಲ್ಲಿ ದೋಷ, KAVERI ಸೇರಿದಂತೆ ಇತರ ಸರ್ಕಾರಿ ತಂತ್ರಾಂಶಗಳೊಂದಿಗೆ ಸಮನ್ವಯದ ಕೊರತೆ ಹಾಗೂ ಯೂನಿಕೋಡ್‌ನಲ್ಲಿನ ಕನ್ನಡ ಟೈಪಿಂಗ್ ದೋಷಗಳಂತಹ ಸಮಸ್ಯೆಗಳು ಕಂಡುಬರುತ್ತಿವೆ ಎಂದು ತಿಳಿಸಲಾಗಿದೆ.
ಇದಲ್ಲದೆ, ಇ-ಸ್ವತ್ತು 1.0ರಲ್ಲಿ ವಿತರಿಸಲಾದ ಖಾತಾ ಪ್ರಮಾಣಪತ್ರಗಳ ಕೆಲವು ವಿವರಗಳ ತಿದ್ದುಪಡಿ, Correction/Mutation ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿರುವುದು ಹಾಗೂ ನಾಗರಿಕರು ಲಾಗಿನ್ ಮೂಲಕ ಅಪ್‌ಲೋಡ್ ಮಾಡಿದ ಆಸ್ತಿ ವಿವರಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಅವಕಾಶವಿಲ್ಲದಿರುವ ಬಗ್ಗೆಯೂ ಗಮನ ಸೆಳೆಯಲಾಗಿದೆ.
ತಕ್ಷಣ ಸಮಸ್ಯೆ ಪರಿಹರಿಸಲು ಆಗ್ರಹ
ಇ-ಸ್ವತ್ತು 2.0 ತಂತ್ರಾಂಶದ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ, ವೇಗ ಮತ್ತು ಸರಳತೆ ತರುವುದು. ಆದರೆ ಹೆಚ್ಚುವರಿ ಅನುಮೋದನಾ ಹಂತಗಳು, ತಾಂತ್ರಿಕ ದೋಷಗಳು ಹಾಗೂ ಆಡಳಿತಾತ್ಮಕ ಅಡಚಣೆಗಳಿಂದಾಗಿ ವ್ಯವಸ್ಥೆಯ ಮೂಲ ಉದ್ದೇಶವೇ ದುರ್ಬಲವಾಗುತ್ತಿದೆ ಎಂದು ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಬಾಕಿ ಇರುವ 11ಎ ಮತ್ತು 11ಬಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು. ಅನಗತ್ಯ ಹೆಚ್ಚುವರಿ ಅನುಮೋದನಾ ಹಂತಗಳನ್ನು ರದ್ದುಪಡಿಸಿ, ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಸಾಧ್ಯವಾದಷ್ಟು ಸೇವೆಗಳನ್ನು ಒದಗಿಸುವ ವ್ಯವಸ್ಥೆ ಜಾರಿಗೆ ತರಬೇಕು. ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ಡಿಜಿಟಲ್ ವ್ಯವಸ್ಥೆಯೇ ಅವರ ಕಚೇರಿ ಅಲೆದಾಟಕ್ಕೆ ಕಾರಣವಾಗದಂತೆ ಸರ್ಕಾರ ತಕ್ಷಣ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 133