ಪುತ್ತೂರು: ಮನೆಯಲ್ಲಿ ಸಿಗಬೇಕಾದ ಸಂಸ್ಕಾರಗಳು ಇಂದು ಎಷ್ಟೋ ಮನೆಗಳಲ್ಲಿ ಇಲ್ಲವಾಗಿವೆ. ಆದರೆ ಸಂಸ್ಕಾರಗಳು ಮಕ್ಕಳಿಗೆ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಬೇಸಿಗೆ ಶಿಬಿರದಂತಹ ಯೋಚನೆಗಳು ಶ್ಲಾಘನೀಯ ಎಂದು ವೇ.ಮೂ.ಕೇಕಣಾಜೆ ಕೇಶವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಸಂಸ್ಕಾರ ಸುಧಾ ಎಂಬ ಬೇಸಗೆ ಶಿಬಿರವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಭಾರತವು ಒಂದು ಕಾಲದಲ್ಲಿ ಸಾರ್ಥಕತೆಯನ್ನು ಹೊಂದಿದ ದೇಶವಾಗಿತ್ತು. ಕ್ರಮೇಣವಾಗಿ ಮಧ್ಯಕಾಲವನ್ನು ತಲುಪಿದಾಗ ಸಂಸ್ಕೃತಿಯ ಕೊಂಡಿಯನ್ನು ಕಳಚಿಕೊಂಡು ಭಾರತೀಯ ವ್ಯವಸ್ಥೆ ಹದಗೆಡಲು ಆರಂಭಿಸಿತು. ಅಂದು ಬಿಗಡಾಯಿಸಿದ್ದ ವ್ಯವಸ್ಥೆಯನ್ನು ಸರಿಪಡಿಸಿ ಕ್ರಾಂತಿಯನ್ನು ಉಂಟುಮಾಡಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.
ಶಿಬಿರವು ಒಂದು ಶಿಕ್ಷಣವಿದ್ದಂತೆ. ಶಿಕ್ಷಣದ ಮೂಲಕ ಅಂತರAಗ ವಿಕಸಿತವಾಗಬೇಕು. ಅಜ್ಞಾನದ ಪೊರೆ ಕಳಚಬೇಕು. ಸಂಸ್ಕಾರವನ್ನು ಬೆಳೆಸಿಕೊಳ್ಳುವುದರ ಮೂಲಕ ನಾವು ನಿಷ್ಠಾವಂತರಾಗಿಯೂ ಶೀಲವಂತರಾಗಿಯು ಮುನ್ನಡೆಯಬೇಕು. ಸ್ವಸ್ಥ ಸಮಾಜಕ್ಕಾಗಿ ನಾವು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಧರ್ಮಾಭ್ಯುದಯ – ಧರ್ಮ ಶಿಕ್ಷಣ ತಾಲೂಕು ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ ಪ್ರತಿನಿತ್ಯ ದೇವರನ್ನು ನೆನೆಯಬೇಕು. ತಾಯಿ ಶಾರದೆಯ ಶರಣಾಗತಿ ಹೊಂದುವ ಮೂಲಕ ಯೋಗ್ಯ ಪ್ರಜ್ಞಾವಂತ ಪ್ರಜೆಗಳಾಗಿ ಬದುಕಿನ ಸಾರ್ಥಕತೆಯನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಶಾಲಾ ಉತ್ತಮವಾದ ವಿಚಾರವನ್ನು ಸಮಾಜಕ್ಕೆ ನೀಡಬೇಕಾದದ್ದು ನಮ್ಮೆಲ್ಲರ ಹೊಣೆ. ಭಾರತೀಯರಲ್ಲಿ ಕೀಳರಿಮೆಯಿದೆ. ಅದನ್ನು ತೊಲಗಿಸುವ ಕೆಲಸ ಶಿಕ್ಷಣದಿಂದ ಆಗಬೇಕು. ಭಾರತದ ಪ್ರಬುದ್ಧತೆಗೆ ಸರಿಸಾಟಿಯಾದ ದೇಶ ಮತ್ತೊಂದಿಲ್ಲ. ಭಾರತ ದೇಶ ಪರಮ ಪವಿತ್ರವಾದ ದೇಶ ಎಂದು ನುಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಅನುಶ್ರೀ ಪ್ರಾರ್ಥಿಸಿ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಸ್ವಾಗತಿಸಿದರು. ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.























