ಕೌಟುಂಭಿಕ ಕಲಹಕ್ಕೆ ದಂಪತಿ ಬಲಿಯಾದ ದಾರುಣ ಘಟನೆ ವರದಿಯಾಗಿದೆ. ಪತ್ನಿಯನ್ನು ಕೊಂದ ಪತಿ, ತಾನು ಮಗು ಸಹಿತ ಬಾವಿಗೆ ಹಾರಿದ್ದಾನೆ. ಅದೃಷ್ಟವಶಾತ್, ಮಗು ಬದುಕುಳಿದಿದ್ದು, ದಂಪತಿ ಕೊನೆಯುಸಿರೆಳೆದಿದ್ದಾರೆ.
ಇದು ನಡೆದಿರುವುದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದಲ್ಲಿ.
ಪತ್ನಿಯನ್ನು ಕೊಲೆ ಮಾಡಿ ಪತಿ ಮಗುವಿನೊಂದಿಗೆ ಬಾವಿಗೆ ಹಾರಿದ್ದಾನೆ. ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಕೂಡಲೇ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ. ಆದರೆ ಬಾವಿಯಲ್ಲಿ ಮುಳುಗಿ ಪತಿ ಸಾವಿಗೆ ಶರಣಾಗಿದ್ದಾನೆ. ಗಂಡನಿಂದಲೇ ಕೊಲೆಯಾದ ಮಹಿಳೆಯನ್ನು 23 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಹಾಗೆಯೇ ಲಕ್ಷ್ಮೀಕಾಂತ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದಂತಹ ವ್ಯಕ್ತಿ.
ಮನೆಯೊಳಗೆ ಹೆಂಡತಿ ಕೊಲೆ ಮಾಡಿದ ಲಕ್ಷ್ಮೀಕಾಂತ ಬಳಿಕ ಮನೆಯ ಹೊರಗಿದ್ದ ಬಾವಿಗೆ ಹಾರಿದ್ದ. ಪತ್ನಿ ಅಂಜಲಿ ಹಾಗೂ ಪತಿ ಲಕ್ಷ್ಮೀಕಾಂತ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದವು, ಕೌಟುಂಬಿಕ ಕಲಹದಿಂದಾಗಿ ಪತ್ನಿ ಅಂಜಲಿ ಗಂಡನ ಕಾಟ ತಾಳದೇ ಒಂದೂವರೆ ವರ್ಷದ ಹಿಂದೆಯೇ ತವರಿಗೆ ಹೋಗಿದ್ದಳು. ಅಂಜಲಿ ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಚಿಕ್ಕೆಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಲ್ಲಿಯೇ ನೆಲೆಸಿದ್ದಳು. ಅಂಜಲಿಗೆ ಮದರಾ ಕೆ ಗ್ರಾಮದಲ್ಲಿ ನೆಲೆಸುವುದು ಇಷ್ಟವಿರಲಿಲ್ಲ, ಮಹಾರಾಷ್ಟ್ರದ ಪೂನಾದಲ್ಲಿ ಕೆಲಸ ಮಾಡಿ ಬದುಕಬೇಕು ಎಂಬುದು ಆಕೆಯ ಬೇಡಿಕೆಯಾಗಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆದಿತ್ತು. ಹೀಗಾಗಿ ಕೇವಲ ನಾಲ್ಕೆ ನಾಲ್ಕು ದಿನಗಳ ಹಿಂದಷ್ಟೇ ಗ್ರಾಮಸ್ಥರು ಹಾಗೂ ಸಂಬಂಧಿಕರು ದಂಪತಿಗಳ ನಡುವೆ ರಾಜೀ ಪಂಚಾಯತಿ ಮಾಡಿಸಿದ್ದರು.
4 ದಿನದ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದ ಅಂಜಲಿ:
ಹೀಗಾಗಿ ನಾಲ್ಕು ದಿನಗಳ ಹಿಂದಷ್ಟೇ ಅಂಜಲಿ ಗಂಡನ ಮನೆಗೆ ಬಂದಿದ್ದಳು. ಆದರೆ ಸಂಧಾನದ ನಂತರ ಹೊಸ ಬದುಕಿ ಭರವಸೆಯೊಂದಿಗೆ ಗಂಡನ ಮನೆಗೆ ಬಂದಿದ್ದ ಅಂಜಲಿ ಇಂದು ಗಂಡನ ಕೈಯಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಪತ್ನಿಯನ್ನು ಕೊಂದ ನಂತರ ಎರಡು ವರ್ಷದ ಮಗುವಿನ ಜೊತೆಗೆ ಲಕ್ಷ್ಮೀಕಾಂತ ಬಾವಿಗೆ ಹಾರಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಸ್ಥಳೀಯರು ಕೂಡಲೇ ಬಾವಿಗೆ ಜಿಗಿದು ಮಗುವನ್ನು ರಕ್ಷಿಸಿದ್ದಾರೆ ಆದರೆ ಲಕ್ಷ್ಮೀಕಾಂತ ಮಾತ್ರ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರೇವೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















