ಪುತ್ತೂರು: ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಸ್ತಾವಿತ ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕು ಎಂದು ಆಗ್ರಹಿಸಿ ಆರಂಭಿಸಿರುವ ಆನ್ಲೈನ್ ಸಹಿ ಅಭಿಯಾನಕ್ಕೆ ಭರ್ಜರಿ ಸ್ಪಂದನೆ ದೊರಕಿದೆ.
ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಿ ಹಾಕುತ್ತಿದ್ದಾರೆ. ಭಾನುವಾರ ಸಂಜೆ ವೇಳೆಗೆ 2,500ಕ್ಕೂ ಅಧಿಕ ಮಂದಿ ಆನ್ಲೈನ್ ಮೂಲಕ ಸಹಿ ಸಲ್ಲಿಸಿದ್ದಾರೆ.
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ದೊರೆತರೆ ಪುತ್ತೂರು, ಕಡಬ, ಸುಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವಿವಿಧ ಕಾರ್ಯಗಳಿಗಾಗಿ ಮಂಗಳೂರು–ಬೆಂಗಳೂರು ನಡುವೆ ಸಂಚರಿಸುವವರಿಗೆ ವೇಗದ ರೈಲು ಸೇವೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ ಎಂಬುದು ಅಭಿಯಾನ ಆಯೋಜಕರ ಆಶಯವಾಗಿದೆ.
ನಿಲುಗಡೆಗೆ ಒತ್ತಾಯಿಸಿ ಆರಂಭಿಸಿರುವ ಸಹಿ ಅಭಿಯಾನಕ್ಕೆ ಇನ್ನಷ್ಟು ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಲಾಗಿದೆ.































