ಪುತ್ತೂರು: ಸಂಕಷ್ಟದಲ್ಲಿದ್ದ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಅರಿಯಡ್ಕ ಗ್ರಾಮದ ಎಂಡೆಸಾಗು ನಿವಾಸಿ ಸಾರಮ್ಮ ಅವರ ಪುತ್ರ ಕಳೆದ 22 ವರ್ಷಗಳಿಂದ ಮನೆಯಲ್ಲೇ ಇರುವ ಪರಿಸ್ಥಿತಿಯಲ್ಲಿದ್ದು, ತಾಯಿಯ ಆರೈಕೆಯಲ್ಲಿದ್ದಾರೆ. ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಅರಿತ ಶ್ರೀ ವಿಷ್ಣು ಯುವಶಕ್ತಿ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಆ.9ರಂದು ಸಾರಮ್ಮ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿದರು.
ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀ ವಿಷ್ಣು ಯುವಶಕ್ತಿ ಬಳಗವು ಕುಟುಂಬದ ಸಂಕಷ್ಟವನ್ನು ಅರಿತು ನೆರವಿಗೆ ಮುಂದಾಗಿದ್ದು, ಸಂಘಟನೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಂಘಟನೆಯ ಪ್ರೋತ್ಸಾಹಕರಾದ ಚಂದ್ರಿಕಾ ಸ್ವಾಮಿನಗರ ಹಾಗೂ ಸುಜಾತಾ ರೈ ಸ್ವಾಮಿನಗರ ಅವರು ಸಾರಮ್ಮ ಅವರಿಗೆ ನೆರವಿನ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ. ಮಯೂರ ಮಾತನಾಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕವು ಈಗಾಗಲೇ ಹಲವು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜಾತಿ, ಧರ್ಮದ ಭೇದವಿಲ್ಲದೆ ಸಂಘಟನೆಯ ಸದಸ್ಯರು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದರು.
ಸಾರಮ್ಮ ಅವರ ಕುಟುಂಬದ ಸಂಕಷ್ಟವನ್ನು ಅರಿತು ಆರ್ಥಿಕ ನೆರವು ನೀಡಲಾಗಿದೆ. ಸಮಾಜದಲ್ಲಿ ಕಷ್ಟದಲ್ಲಿರುವವರ ಕಣ್ಣೀರೊರೆಸಲು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.
ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿ ಆರ್ಥಿಕವಾಗಿ ನೆರವು ನೀಡಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ರಾಜೇಶ್ ಕೆ. ಮಯೂರ ಕೃತಜ್ಞತೆ ಸಲ್ಲಿಸಿದರು.
























