ತಮಿಳುನಾಡಿನಾದ್ಯಂತ ಇರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳ ಒಳಗೆ ಮೊಬೈಲ್ ಫೋನ್ಗಳ ಬಳಕೆಯನ್ನು ಸೆಪ್ಟೆಂಬರ್ 1 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದರ್ಮಾದಾಯ (HR&CE) ಸಚಿವ ಎಸ್. ರಮೇಶ್ ಘೋಷಿಸಿದ್ದಾರೆ.
ತಿರುಚಿಯ ಶ್ರೀರಂಗಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಕ್ತಾದಿಗಳು ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್ಗಳನ್ನು ಇಡಲು ದೇವಸ್ಥಾನದ ಹೊರಗೆ ಅಥವಾ ಪ್ರವೇಶ ದ್ವಾರದಲ್ಲೇ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವು ದೇವಸ್ಥಾನಗಳ ಗರ್ಭಗುಡಿ ಹಾಗೂ ಪವಿತ್ರ ಪೂಜಾ ಕೈಂಕರ್ಯಗಳ ವೀಡಿಯೊಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸಲಾಗುತ್ತಿತ್ತು. ದೇವಸ್ಥಾನಗಳ ಆವರಣದಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ‘ರೀಲ್ಸ್’ ಮತ್ತು ಶಾರ್ಟ್ಸ್ ವೀಡಿಯೊಗಳನ್ನು ಮಾಡುವುದನ್ನು ತಡೆಯುವುದು ಹಾಗೂ ಪವಿತ್ರತೆಯನ್ನು ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಮೊಬೈಲ್ ಫೋನ್ಗಳನ್ನು ಸುರಕ್ಷಿತವಾಗಿಡಲು ಪ್ರತ್ಯೇಕ ‘ಡೆಪಾಸಿಟ್ ಕೌಂಟರ್’ ಸ್ಥಾಪಿಸಲಾಗುತ್ತದೆ. ವರದಿಗಳ ಪ್ರಕಾರ, ಭಕ್ತರು ದೇವದರ್ಶನ ಮುಗಿಸಿ ಬರುವವರೆಗೆ ಮೊಬೈಲ್ ಸುರಕ್ಷತೆಗಾಗಿ ಪ್ರತಿ ಫೋನ್ಗೆ 5 ರೂ ಶುಲ್ಕ ವಿಧಿಸಲಾಗುತ್ತದೆ.
ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಐಪಿಗಳ (VIP) ಭೇಟಿಗೆ ಸಂಬಂಧಿಸಿದಂತೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜಕಾರಣಿಗಳು, ಚಲನಚಿತ್ರ ತಾರೆಯರು ಹಾಗೂ ಇತರ ಗಣ್ಯರು ದೇವಾಲಯಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ಭೇಟಿಯ ಸಮಯ ಹಾಗೂ ಜೊತೆಯಲ್ಲಿ ಬರುವವರ ಸಂಖ್ಯೆಯನ್ನು ಸ್ಪಷ್ಟಪಡಿಸಬೇಕು. ತುರ್ತು ಸಂದರ್ಭದ ವಿಐಪಿ ಭೇಟಿಗಳಿದ್ದರೂ, ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ವಿಐಪಿ ಭೇಟಿಗಳ ಸಂದರ್ಭದಲ್ಲೂ ದೇವಾಲಯದ ಒಳಗೆ ಯಾವುದೇ ರೀತಿಯ ವೀಡಿಯೋಗ್ರಫಿ ಅಥವಾ ಫೋಟೋಗ್ರಫಿಗೆ ಅವಕಾಶವಿರುವುದಿಲ್ಲ.
























