ಹಾಸನ: ಹಾಸನ ಮಂಗಳೂರು ನಡುವೆ ಹೊಸ ರೈಲು ಮಾರ್ಗ ನಿರ್ಮಿಸಲು ರೈಲ್ವೆ ಇಲಾಖೆ ಮುಂದಾಗಿದ್ದು ಅಂತಿಮ ಸ್ಥಳ ಸಮೀಕ್ಷೆ (ಎಫ್ಎಲ್ಎಸ್) ನಡೆಸಲು ಟೆಂಡರ್ ಕರೆಯಲಾಗಿದೆ
ಪಶ್ಚಿಮ ಘಟ್ಟದಲ್ಲಿ ನಿರಂತರ ಭೂಕುಸಿತ ಆಗುತ್ತಿದ್ದರೂ ಹಾಸನ ಮತ್ತು ಮಂಗಳೂರು ನಡುವಿನ 247 ಕಿ.ಮೀ. ಉದ್ದದ ಹೊಸ ಮಾರ್ಗದ (ಸಿಂಗಲ್/ಡಬಲ್) ಹಾಗೂ ಕ್ಯಾಸೆಲ್ರಾಕ್-ಕುಲೆಮ್ ನಡುವಿನ 72ಕಿ.ಮೀ. ಹೊಸ ಜೋಡಿ ಮಾರ್ಗ ನಿರ್ಮಾಣದ ಸ್ಥಳ ಸಮೀಕ್ಷೆಗೆ ₹21.36 ಕೋಟಿ ಮೊತ್ತದ ಟೆಂಡರ್ ಅನ್ನು ಜ. 1ರಂದು ಆಹ್ವಾನಿಸಲಾಗಿದೆ. ಜ.29ರೊಳಗೆ ಪ್ರಾರಂಭಿಕ ಬಿಡ್ ಹಾಗೂ ಫೆ.12ರೊಳಗೆ ಪರಿಷ್ಕೃತ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹಾಸನ ಮಂಗಳೂರು ಹೊಸ ಮಾರ್ಗಕ್ಕೆ ವಿವರವಾದ ಯೋಜನಾ ವರದಿ ತಯಾರಿಕೆ. ಭೂ ತಾಂತ್ರಿಕ ತನಿಖೆ, ಸಿಗ್ನಲ್ ಕೆಲಸಗಳು ಮತ್ತು ಹೊಸ ಸಿಂಗಲ್/ಡಬಲ್ ಮಾರ್ಗ ನಿರ್ಮಾಣದ ಬಗ್ಗೆ ಒಂದು ವರ್ಷದೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ತಿಳಿಸಲಾಗಿದೆ. ಹಾಸನ-ಮಂಗಳೂರು ನಡುವಿನ ಅಂತರ 189 ಕಿ.ಮೀ. ಇದೆ. ಹೊಸ ಮಾರ್ಗ ನಿರ್ಮಾಣ ಆದರೆ ಇದು 247 ಕಿ.ಮೀ. ಆಗಬಹುದು ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ‘ಹಾಸನ-ಮಂಗಳೂರು ಮಾರ್ಗದ ಸಾಮರ್ಥ್ಯ ಹೆಚ್ಚಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ. ರೈಲ್ವೆ ಸಚಿವಾಲಯವು ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗದ ದ್ವಿಪಥ ಮತ್ತು ವಿದ್ಯುದ್ವೀಕರಣ ಮಂಜೂರು ಮಾಡಿದ್ದರೂ ಇದು ಬಹುತೇಕ ಅಸಾಧ್ಯ.
ಸಚಿವಾಲಯವು ಸಂಪೂರ್ಣವಾಗಿ ಭಿನ್ನವಾದ ಹೊಸ ಮಾರ್ಗದಲ್ಲಿ ಕೆಲಸ ಮಾಡಬೇಕು. ಅದಕ್ಕಾಗಿ ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆ’ ಎಂದು ತಿಳಿಸಿದರು.
ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿ ರಸ್ತೆಗಳು ಹಾಗೂ ಪಶ್ಚಿಮ ಘಟ್ಟದ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸುತ್ತಿದ್ದು. ವಾಹನ ಸಂಚಾರ ಮತ್ತು ರೈಲು ಸಂಚಾರ ಆಗಾಗ ಸ್ಥಗಿತವಾಗುತ್ತಿದೆ. ಕರಾವಳಿ ಹಾಗೂ ಬೆಂಗಳೂರು ನಡುವಿನ ತಡೆರಹಿತ ಸಂಪರ್ಕಕ್ಕೆ ತೊಂದರೆ ಆಗುತ್ತಿದೆ. ಇದು ವಾಣಿಜ್ಯ ವಹಿವಾಟಿನ ಮೇಲೂ ಪರಿಣಾಮ ಬೀರುತ್ತಿದೆ’ ಎನ್ನುವ ಮಾತು ಕರಾವಳಿ ಭಾಗದ ವಾಣಿಜ್ಯೋದ್ಯಮಿಗಳದ್ದಾಗಿದೆ.ಹಾಸನ ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ಪ್ರಯಾಣಕ್ಕೆ 3 ಗಂಟೆ ಬೇಕಾಗುತ್ತಿದೆ. ಈ ಅವಧಿ ಕಡಿಮೆ ಮಾಡಲು ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ. ವಿ. ಸೋಮಣ್ಣ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ