ಪುತ್ತೂರು: ಕುರಿಯ ಸರಕಾರಿ ಉನ್ನತ ಹಿ.ಪ್ರಾ. ಶಾಲಾ ಇಕೋ ಕ್ಲಬ್ ವತಿಯಿಂದ ಮಂಗಳವಾರ ಕುರಿಯ ಬೂಡಿಯಾರ್ ಫಾರ್ಮ್ಸ್ ನಲ್ಲಿ ಕೆಸರ್’ಡೊಂಜಿ ದಿನ ಆಯೋಜಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೂಡಿಯಾರ್ ಫಾರ್ಮ್ಸ್ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು, ಮಕ್ಕಳಿಗೆ ಗದ್ದೆಯ ಬಗ್ಗೆ ತಿಳುವಳಿಕೆ ನೀಡುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಕುರಿಯ ಶಾಲಾ ವಿದ್ಯಾರ್ಥಿಗಳನ್ನು ಬೂಡಿಯಾರ್ ಫಾರ್ಮ್ಸ್’ಗೆ ಕರೆತಂದು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದು ಮಕ್ಕಳ ಆರೋಗ್ಯಕ್ಕೂ ಉತ್ತಮ ಎಂದು ಅಭಿಪ್ರಾಯಪಟ್ಟರು.
ಬೂಡಿಯಾರ್ ರಾಧಾಕೃಷ್ಣ ರೈ ಅವರ ಪತ್ನಿ ಜಯಲಕ್ಷ್ಮೀ ರೈ, ಮೊಮ್ಮಗ ದೇವಾಂಶ್ ಶೆಟ್ಟಿ, ಕುರಿಯ ಉ. ಹಿ.ಪ್ರಾ ಶಾಲಾ ಮುಖ್ಯಶಿಕ್ಷಕಿ ಫೆಲ್ಸಿಟಾ ಡಿಕುನ್ಹಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಬ್ಬಾರ್, ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳಿಗೆ ಕೆಸರಿನ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಜೊತೆಗೆ ಮನರಂಜನಾ ಆಟ ಆಡಿಸಲಾಯಿತು. ಹಗ್ಗಜಗ್ಗಾಟ, 100 ಮೀ. ಓಟ, ಫುಟ್ಬಾಲ್, ನಿಧಿ ಹುಡುಕುವುದು ಇತ್ಯಾದಿ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ, ಪ್ರೋತ್ಸಾಹಿಸಲಾಯಿತು.
























