ಎರಡು ದಶಕಗಳಿಂದ ಸೌದಿ ಅರೇಬಿಯಾದ ಜೈಲಿನಲ್ಲಿ ಮರಣದಂಡನೆಯನ್ನು ಎದುರು ನೋಡುತ್ತಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಕೇರಳಂನ ಕೋಝಿಕ್ಕೋಡಿನಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ತನ್ನನ್ನು ಮರಳಿ ತವರು ನೆಲಕ್ಕೆ ಕರೆತರಲು ಸಹಕರಿಸಿದ ಪ್ರತಿಯೋರ್ವರಿಗೂ ಅವರು ದನ್ಯವಾದ ಸಲ್ಲಿಸಿದರು.
ಅಷ್ಟಕ್ಕೂ ಆಗಿದ್ದೇನು?
ಅಬ್ದುಲ್ ರಹೀಮ್ ಕೇರಳಂನಲ್ಲಿ ಶಾಲಾ ಬಸ್ ಮತ್ತು ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಉತ್ತಮ ಅವಕಾಶಗಳನ್ನು ಹುಡುಕುತ್ತಾ ರಹೀಮ್ ನವೆಂಬರ್ 28, 2006 ರಂದು ಸೌದಿ ಅರೇಬಿಯಾದ ರಿಯಾದ್ಗೆ ಚಾಲಕನ ಕೆಲಸಕ್ಕಾಗಿ ತೆರೆಳಿದ್ದರು. ಕೆಲಸಕ್ಕೆ ಸೇರಿದ ಕೇವಲ 28 ದಿನಗಳಲ್ಲಿ (ಡಿಸೆಂಬರ್ 24, 2006) ರಹೀಮ್ ತನ್ನ ಮಾಲೀಕ ಅಬ್ದುಲ್ ರಹಮಾನ್ ಅಲ್ ಶಹ್ರಿಯವರ 17 ವರ್ಷದ ಪಾರ್ಶ್ವವಾಯು ಪೀಡಿತ ಮಗ ಅನಸ್ ಅಲ್ ಶಹ್ರಿನನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಆ ಬಾಲಕ ಉಸಿರಾಟದ ಯಂತ್ರದ ಸಹಾಯದಿಂದ ಬದುಕುತ್ತಿದ್ದ. ಆಕಸ್ಮಿಕವಾಗಿ ಕಾರಿನಲ್ಲಿ ಆ ಯಂತ್ರವು ಕಳಚಿಕೊಂಡ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದನು. ಆಕಸ್ಮಿಕವಾಗಿ ನಡೆದ ಬಾಲಕನ ಸಾವಿನ ಪ್ರಕರಣದಲ್ಲಿ ರಹೀಮ್ ಅವರನ್ನೇ ಹೊಣೆಯಾಗಿಸಿ ಸೌದಿ ಪೊಲೀಸರು ಬಂಧಿಸಿದ್ದರು.
ಬಾಲಕನ ಸಾವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸೌದಿ ನ್ಯಾಯಾಲಯವು ರಹೀಮ್ ಆರೋಪಿ ಎಂದು 2010 ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ರಹೀಮ್ ಕುಟುಂಬವು ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತು, ಆದರೆ ಅಲ್ಲಿಯೂ ಅದೇ ಶಿಕ್ಷೆಯನ್ನು ಎತ್ತಿಹಿಡಿಯಲಾಯಿತು. ಇತ್ತ ಕೇರಳಂನಲ್ಲಿರುವ ಅವರ ಕುಟುಂಬವು ತಮ್ಮ ಮಗನ ಮರಣದಂಡನೆಯ ನಿರಂತರ ಭಯದಲ್ಲಿ ವಾಸಿಸುತ್ತಿತ್ತು.
ಶಿಕ್ಷೆಯಿಂದ ಪಾರಾಗಲು 34 ಕೋಟಿ ರೂ. ದಂಡ!!
ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಅಬ್ದುಲ್ ರಹೀಮ್ ಅವರನ್ನು ಉಳಿಸಿಕೊಳ್ಳಲು ಮೃತ ಬಾಲಕನ ಕುಟುಂಬವು ಒಂದು ಷರತ್ತು ವಿಧಿಸಿತು. ಅಬ್ದುಲ್ ರಹೀಮ್ 15 ಮಿಲಿಯನ್ ಸೌದಿ ರಿಯಾಲ್ಗಳು (ಸುಮಾರು 34 ಕೋಟಿ ರೂ.) ತಾಯ್ತನದ ಪರಿಹಾರ ಧನವನ್ನು ನೀಡಿದರೆ ಅವರನ್ನು ಕ್ಷಮಿಸಲು ಒಪ್ಪಿಕೊಂಡರು. ಬಡ ಚಾಲಕನ ಕುಟುಂಬಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ಅಸಾಧ್ಯವಾದ ಕೆಲಸವಾಗಿತ್ತು.
ರಹೀಮ್ ಜೀವ ಉಳಿಸಲು ಒಂದಾದ ಮಲಯಾಳಿಗಳು:
ರಹೀಮ್ ಜೀವ ಉಳಿಸಲು ಪ್ರಪಂಚದಾದ್ಯಂತದ ಇರುವ ಮಲಯಾಳಿಗಳು ಒಂದಾದರು. ಪ್ರಪಂಚದಾದ್ಯಂತ ಕ್ರೌಡ್ ಫಂಡಿಂಗ್ ಮೂಲಕ ದೇಣಿಗೆ ಸಂಗ್ರಹಿಸಲಾಯಿತು. ಕೆಲವೇ ದಿನಗಳಲ್ಲಿ ಸಾಮಾನ್ಯ ಕೂಲಿ ಕಾರ್ಮಿಕರು, ಅನಿವಾಸಿ ಭಾರತೀಯರು, ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕಾರಣಿಗಳು ಕೈಜೋಡಿಸಿ ಸೋಶಿಯಲ್ ಮೀಡಿಯಾ ಮೂಲಕ ದಾಖಲೆಯ 34 ಕೋಟಿ ರೂ.ಗಳನ್ನು ಸಂಗ್ರಹಿಸಿ ಸೌದಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ರಹೀಮ್ ಅವರ ಗಲ್ಲು ಶಿಕ್ಷೆಯನ್ನು ಸೌದಿ ನ್ಯಾಯಾಲಯ ರದ್ದು ಮಾಡಿತು.
























