tamanvi
ಧಾರ್ಮಿಕ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ಆದಿ ಸುಬ್ರಹ್ಮಣ್ಯ ದೇವಳಕ್ಕೆ ನುಗ್ಗಿದ ನೆರೆ ನೀರು

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ದರ್ಪಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮವಾಗಿ ಆದಿ ಸುಬ್ರಹ್ಮಣ್ಯ ದೇವಳದ ಮುಂಭಾಗಕ್ಕೆ ನೆರೆ ನೀರು ಪ್ರವೇಶಿಸಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ದರ್ಪಣ ತೀರ್ಥ ನದಿಯಲ್ಲಿ ರಭಸವಾಗಿ ನೀರು ಹರಿದು ಬಂದಿದೆ. ನೆರೆ ನೀರು ದೇವಳದ ಮುಂಭಾಗಕ್ಕೆ ಪ್ರವೇಶಿಸಿದ್ದರಿಂದ ಆದಿ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸಿದ್ದ ಭಕ್ತರು ಕೆಲಕಾಲ ದೇವಳದ ಒಳಗೆ ಹಾಗೂ ಹೊರಭಾಗದ ವಿಸ್ತಾರ ಪ್ರದೇಶದಲ್ಲಿ ನಿಲ್ಲುವಂತಾಯಿತು.

ಸ್ಥಳೀಯರ ಪ್ರಕಾರ, ಕಳೆದ ವರ್ಷವೂ ಇದೇ ರೀತಿಯಲ್ಲಿ ನೆರೆ ನೀರು ದೇವಳದ ಪರಿಸರಕ್ಕೆ ಪ್ರವೇಶಿಸಿತ್ತು. ಪ್ರಸಕ್ತ ಮಳೆಗಾಲದಲ್ಲಿ ದರ್ಪಣ ತೀರ್ಥ ನದಿಯಲ್ಲಿ ಇಷ್ಟೊಂದು ಪ್ರಮಾಣದ ನೀರು ಹರಿದು ಬಂದಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ಬೈಪಾಸ್ ರಸ್ತೆಯಲ್ಲೂ ನೀರು ಸಂಗ್ರಹ

ಭಾರೀ ಮಳೆಯ ಪರಿಣಾಮವಾಗಿ ಕುಕ್ಕೆ ಸುಬ್ರಹ್ಮಣ್ಯದ ಬೈಪಾಸ್ ಮುಖ್ಯರಸ್ತೆಯಲ್ಲೂ ನೆರೆ ನೀರು ಸಂಗ್ರಹಗೊಂಡಿದ್ದು, ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡುವಂತಾಯಿತು. ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ನೀರು ರಸ್ತೆಯಲ್ಲಿ ನಿಲ್ಲಲು ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ ಕುಮಾರಧಾರ ನದಿಯಲ್ಲಿ ಅಷ್ಟೊಂದು ಪ್ರಮಾಣದ ನೀರು ಹರಿದುಬಾರದ ಹಿನ್ನೆಲೆಯಲ್ಲಿ ಸ್ನಾನಘಟ್ಟ ಮುಳುಗಡೆಯಾಗಿಲ್ಲ.

ಭಕ್ತರಿಗೆ ದರ್ಶನ, ಪ್ರಸಾದ ವ್ಯವಸ್ಥೆ

ಇಂದು ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು. ಮಳೆಯ ನಡುವೆಯೂ ಶ್ರೀ ದೇವಳದ ವತಿಯಿಂದ ಭಕ್ತರಿಗೆ ಸುಗಮ ದರ್ಶನ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಮತ್ತು ರಾತ್ರಿ ಭೋಜನಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಭಕ್ತರ ಸುಗಮ ದರ್ಶನ ಮತ್ತು ಪ್ರಸಾದ ವಿತರಣೆಗೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts