ಪುತ್ತೂರು: ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ವೈಭವಯುತವಾಗಿ ನಡೆದು, ಭಾನುವಾರ ಬೆಳಿಗ್ಗೆ ಸಮಾಪನಗೊಂಡಿತು.
ಶನಿವಾರ ಸಂಜೆ ದೇವರ ಬಲಿ ಹೊರಟು, ರಕ್ತೇಶ್ವರಿ ದೈವದ ನುಡಿಯಾಗಿ ಬಳಿಕ ವೀರಮಂಗಲಕ್ಕೆ ಅವಬೃತ ಸ್ನಾನಕ್ಕಾಗಿ ಹೊರಟರು.
ಸುಮಾರು 14 ಕಿಲೋ ಮೀಟರ್ ದೂರದ ವೀರಮಂಗಲಕ್ಕೆ ತೆರಳುವ ದಾರಿಯುದ್ಧಕ್ಕೂ 57 ಕಡೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದರು. ಇದರೊಂದಿಗೆ ಭಕ್ತರಿಂದ ಆರತಿ ಸೇವೆಯನ್ನು ಒಪ್ಪಿಸಿಕೊಂಡರು. ಭಾನುವಾರ ಬೆಳಿಗ್ಗೆ ಸುಮಾರು 6.15ಕ್ಕೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಅಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ, ಬಳಿಕ ಕುಮಾರಧಾರ ಹೊಳೆಯಲ್ಲಿ ಅವಬೃತ ಸ್ನಾನ ನಡೆಯಿತು.
ಬ್ರಹ್ಮಶ್ರೀ ಕುಂಟಾರು ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರು, ವೈದಿಕರಿಂದ ಮಂತ್ರ ಘೋಷದೊಂದಿಗೆ ಅಭಿಷೇಕಾದಿ ಸ್ನಾನ ಮುಗಿಸಿ, ಅಲ್ಲಿಂದ ನೇರ ದೇವಳಕ್ಕೆ ಆಗಮಿಸಿ 11.23ಕ್ಕೆ ಧ್ವಜಾವರೋಹಣ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಎಂದಿನಂತೆ ಈ ಬಾರಿಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ಅವಬೃತ ಸ್ನಾನದ ಸೊಬಗು ಕಣ್ತುಂಬಿಕೊಂಡರು.
ಭಾನುವಾರ ರಾತ್ರಿ ಚೂರ್ಣೋತ್ಸವ ನಡೆದು, ಬಳಿಕ ಪಿಲಿಭೂತ, ರಕ್ತೇಶ್ವರಿ ದೈವಗಳ ನೇಮ ನಡೆಯಲಿದೆ.






















