ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು.
ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಮೆರವಣಿಗೆಗೆ ಚಾಲನೆ ನೀಡಿದರು. ಬ್ಯಾಂಡ್ ವಾದ್ಯದೊಂದಿಗೆ ನಡೆದ ಮೆರವಣಿಗೆಯಲ್ಲಿ ಹಿರಿಯರಾದ ಕೃಷ್ಣಕುಮಾರ್ ರೈ ಪಿ.ಡಿ, ಪ್ರಾಂಶುಪಾಲೆ ಪದ್ಮಾವತಿ, ಹಿರಿಯ ಪದವೀಧರ ಸಹಾಯಕಿ ಶ್ರೀಲತಾ, ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ, ಎಸ್ ಡಿ ಎಂ ಸಿ ಅಧ್ಯಕ್ಷ ರಾಧಾಕೃಷ್ಣ, ಸವಣೂರು ಗ್ರಾಮ ಪಂಚಾಯಿತ್ ಪಿಡಿಓ ವಸಂತ್ ಶೆಟ್ಟಿ, ಲೆಕ್ಕ ಸಹಾಯಕಿ ಜಯಂತಿ, ಗ್ರಾಪಂ ಸಿಬ್ಬಂದಿ ಪ್ರಮೋದ್, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.
ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ:
ಹೊಸ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಹೊಸ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳೊಂದಿಗೆ ದೀಪ ಬೆಳಗಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ಕೊಟ್ಟರು.
ಗಿರಿಶಂಕರ ಸುಲಾಯ ಅವರು ವಿದ್ಯಾಸಂಸ್ಥೆ ನಡೆದು ಬಂದ ದಾರಿ, ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪಿಡಿಒ ವಸಂತ್ ಶೆಟ್ಟಿ ಅವರು ಸವಣೂರು ಪಂಚಾಯತ್ ವತಿಯಿಂದ ಶಾಲೆಗೆ ನೀಡುತ್ತಿರುವ ಸಹಾಯದ ಬಗ್ಗೆ ನೆನಪಿಸಿಕೊಂಡರು ಮತ್ತು ವಿದ್ಯಾ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ರಾಧಾಕೃಷ್ಣ ಅವರು ತನ್ನ ಅಧಿಕಾರ ಅವಧಿಯಲ್ಲಿ 3 ವರ್ಷಗಳ ಕಾಲ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ಪಡೆದಿದ್ದಕ್ಕೆ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಅವರು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೆಲವು ಸೂಕ್ತ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಸಂಗೀತ ಶಿಕ್ಷಕಿ ಪವಿತ್ರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿರಿಯ ಪದವೀಧರ ಸಹಾಯಕಿ ಶ್ರೀಲತಾ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಬಿ ವಿ ಕಿಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ವಿಜ್ಞಾನ ಶಿಕ್ಷಕಿ ರೀನಾ ಎಂಡಿ ವಂದಿಸಿದರು. ಕನ್ನಡ ಭಾಷಾ ಅತಿಥಿ ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.





















