ಪುತ್ತೂರು: ಉತ್ತರ ಭಾರತದ ಹಲವು ರಾಜ್ಯಗಳಿಗೆ ತೆರಳುವ ಕ್ಯಾಂಪ್ಕೋ ಸಹಿತ ರಾಜ್ಯದ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ತಡೆ ಹಿಡಿಯಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಅಡಿಕೆಗೆ ಸಂಬಂಧಪಟ್ಟ ಸಂಸ್ಥೆ, ಜನಪ್ರತಿನಿಧಿಗಳು, ಇಲಾಖೆಗಳ ಜೊತೆಗೆ ಸಭೆ ಕರೆದು ಉಭಯ ಸರಕಾರಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ)ಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15-20 ದಿನಗಳಿಂದ ಅಡಿಕೆ ಮಾರುಕಟ್ಟೆ ಹಾಗೂ ಸಾಗಾಟದ ಕುರಿತು ಬಹಳಷ್ಟು ಗೊಂದಲಗಳ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಮಹಾರಾಷ್ಟ್ರ ಮೂಲಕ ಉತ್ತರ ಭಾರತದ ಹಲವು ರಾಜ್ಯಕ್ಕೆ ತೆರಳುವ ಅಡಿಕೆಯನ್ನು ಮಹಾರಾಷ್ಟ್ರದ ಆರೋಗ್ಯ ಇಲಾಖಾ ಆಯುಕ್ತರು ಆಹಾರದ ಕಳಪೆ ಮಟ್ಟದ ಪರಿಶೀಲನೆಯ ನೆಪದಲ್ಲಿ ತಡೆಹಿಡಿದಿದ್ದಾರೆ. 1000ಕ್ಕೂ ಅಧಿಕ ಲಾರಿಗಳು ಇದೀಗ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದು, ಅಡಿಕೆ ಬೆಳೆಗಾರರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕವು ಭಾರತದ ಅತಿ ದೊಡ್ಡ ಅಡಿಕೆ ಉತ್ಪಾದಕ ರಾಜ್ಯವಾಗಿದೆ. ಸುಮಾರು 6.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ ಸುಮಾರು 10-11 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಭಾರತದಲ್ಲಿ ಉತ್ಪಾದನೆಯಾಗುವ ಅಡಿಕೆ ಮೌಲ್ಯ ಸುಮಾರು ರೂ. 58 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಾಗಾಣೆದಾರರು, ಸಂಸ್ಕರಣೆ ಘಟಕಗಳು ಸೇರಿದಂತೆ ಲಕ್ಷಾಂತರ ಮಂದಿ ಅಡಿಕೆ ಆಧಾರಿತ ಜೀವನ ನಡೆಸುತ್ತಿದ್ದಾರೆ. ದೇಶದ ಸರಿಸುಮಾರು 60 ಲಕ್ಷ ಜನರ ಜೀವನೋಪಾಯ ಅಡಿಕೆ ಕ್ಷೇತ್ರದಿಂದ ಅವಲಂಬಿತವಾಗಿದೆ. ರಾಜ್ಯದಲ್ಲಿ ಉತ್ತರಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಡಿಕೆಯೇ ಮುಖ್ಯ ಆದಾಯವಾಗಿರುತ್ತದೆ. ಇದೀಗ ನಿರ್ಮಾಣವಾಗಿರುವ ಪರಿಸ್ಥಿತಿ ಮುಂದುವರಿದರೆ, ಇಡೀಯ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಆದ್ದರಿಂದ ಸರಕಾರಿಗಳು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಮಾತನಾಡಿ, ಸ್ಥಳೀಯವಾಗಿ ಬೆಳೆಯುವ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಹೊರ ದೇಶಗಳಿಂದ ಬರುವ ಅಡಿಕೆಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರಬಹುದು. ಹಾಗೆಂದು ಅಡಿಕೆ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ವಿಷಕಾರಕ ರಾಸಾಯನಿಕ ಸಿಂಪಡಣೆ ನಮ್ಮಲ್ಲಿಯೂ ನಡೆಯುತ್ತದೆ. ಇವುಗಳು ಸರಕಾರದಿಂದ ಅನುಮತಿ ಪಡೆದ ವಿಷ. ಉದಾಹರಣೆಗೆ ಕರಾಟೆ ಎನ್ನುವ ರಾಸಾಯನಿವನ್ನು, ಅಡಿಕೆಯ ಹೊರಭಾರಕ್ಕೆ ಸಿಂಪಡಿಸಲಾಗುತ್ತದೆ. ಇವುಗಳು 15 ಗಂಟೆಗಳಲ್ಲಿ ಪ್ರಕೃತಿಯಲ್ಲಿ ಲೀನವಾಗುತ್ತದೆ. ಭತ್ತಕ್ಕೆ ಸಿಂಪಡಿಸುವ ರಾಸಾಯನಿಕವನ್ನು ಅಕ್ಕಿ ತಯಾರಿಸುವ ಪ್ರಕ್ರಿಯೆಯ ಮೊದಲಿಗೆ ಸಿಂಪಡಣೆ ಮಾಡಲಾಗುತ್ತದೆ; ನಂತರವಲ್ಲ. ಹಾಗಾಗಿ ಇದು ಹಾನಿಕಾರಕ ಆಗುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿ ರೈತರ ಕೈಯಲ್ಲಿ ಅಕ್ಕಿಗೆ, ಅಡಿಕೆಗೆ ವಿಷ ಬೆರೆಸುವ ಕೆಲಸ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚೆತ್ತಡ್ಕ, ಕೋಡಿಂಬಾಡಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಕುಮಾರನಾಥ್ ಎಸ್., ಕಾರ್ಯದರ್ಶಿ ಯೋಗೀಶ್ ಎಸ್. ಸಾಮಾನಿ ಸಂಪಿಗೆದಡಿ, ಬೆಳ್ಳಿಪ್ಪಾಡಿ ಘಟಕ ಅಧ್ಯಕ್ಷ ಮಾರ್ಷಲ್ ವೇಗಸ್ ಉಪಸ್ಥಿತರಿದ್ದರು.






















