ವಾಣಿಜ್ಯ ಸಂಕೀರ್ಣದ ಮುಂಭಾಗ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ತೆರವು ಮಾಡುವ ಮೂಲಕ ಪೆರಾಬೆ ಗ್ರಾಮ ಪಂಚಾಯತ್, ಶಕ್ತಿ ನ್ಯೂಸ್ ಮಾಡಿದ್ದ ವರದಿಗೆ ಸ್ಪಂದಿಸಿದೆ.
ವಾಣಿಜ್ಯ ಸಂಕೀರ್ಣದ ಮಾಲಕರ ಆಕ್ಷೇಪದ ಹೊರತಾಗಿಯೂ ಜೂನ್ 2ರಂದು ಕುಂತೂರು ಕೆಳಗಿನಪೇಟೆಯ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದಲ್ಲಿ ಶುಭಾಶಯದ ಬ್ಯಾನರನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಜೂನ್ 3ರಂದು ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಪಟ್ಟವರು ಪೆರಾಬೆ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ದೂರು ನೀಡಿದ್ದರು. ಸ್ಪಂದಿಸಿದ ಪಿಡಿಓ ಅವರು, ಒಂದು ವಾರಗಳ ಬಳಿಕ ಬ್ಯಾನರ್ ತೆರವು ಮಾಡುವ ಭರವಸೆ ನೀಡಿದ್ದರು.
ಆದರೆ ವಾರ ಬಿಟ್ಟು 10 ದಿನ ಕಳೆದರೂ ಬ್ಯಾನರ್ ತೆರವು ಮಾಡುವ ಸೂಚನೆ ಸಿಗದೇ ಇದ್ದಾಗ, ಕಡಬ ತಾಲೂಕು ಪಂಚಾಯತ್ ಕದವನ್ನು ತಟ್ಟಿದ್ದರು. ಆದರೆ ಪರಿಹಾರ ಶೂನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಶಕ್ತಿ ನ್ಯೂಸ್ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪೆರಾಬೆ ಗ್ರಾಮ ಪಂಚಾಯತ್ ಪಿಡಿಓ ಅವರು ತಕ್ಷಣದಲ್ಲೇ ತೆರವು ಮಾಡಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಶುಕ್ರವಾರ ರಾತ್ರಿಯೇ ಬ್ಯಾನರ್ ತೆರವು ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.




















