ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ವಿಧಾನಮಂಡಲದ ಉಭಯ ಸದನಗಳ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರಕ್ಕೆ ಮಹತ್ವದ ಪರೀಕ್ಷೆಯಾಗಲಿದೆ.
ಅಧಿವೇಶನದಲ್ಲಿ ನೂತನ ಸಚಿವ ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆ, ಬಿಡದಿ ಟೌನ್ಶಿಪ್ ಯೋಜನೆ, ಕಾವೇರಿ ನದಿ ನೀರಿನ ವಿಚಾರ, ಕೆಪಿಎಸ್ಸಿ ಹಗರಣ ಸೇರಿದಂತೆ ಹಲವು ವಿಷಯಗಳು ಪ್ರತಿಧ್ವನಿಸುವ ಸಾಧ್ಯತೆಯಿದೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ–ಜೆಡಿಎಸ್ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆ ಇದೆ.
ಕ್ಲೀನ್ಚಿಟ್ ದೊರೆಯುವ ಮೊದಲೇ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ವಿಚಾರವನ್ನೂ ಪ್ರತಿಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಯಿದೆ. ಸರ್ಕಾರದ ವಿರುದ್ಧ ಹಲವು ವಿಷಯಗಳಲ್ಲಿ ಪ್ರತಿಪಕ್ಷಗಳು ಮುಗಿಬೀಳುವ ನಿರೀಕ್ಷೆಯಿದ್ದು, ಆಡಳಿತ ಪಕ್ಷವೂ ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ.
ಅಧಿವೇಶನದ ಮೊದಲ ದಿನ ಸಂಪ್ರದಾಯದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಬಳಿಕ ಸೋಮವಾರದಿಂದ ನಿಯಮಿತ ಕಲಾಪ ಆರಂಭವಾಗಲಿದೆ.
ಇದೇ ಅಧಿವೇಶನದಲ್ಲಿ ವಿಧಾನಸಭೆಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ವಿಧಾನ ಪರಿಷತ್ನಲ್ಲಿಯೂ ಹೊಸ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಇದು ಮೊದಲ ವಿಧಾನಮಂಡಲ ಅಧಿವೇಶನವಾಗಿದ್ದು, ಅವರ ಸಂಪುಟದ ಹಲವು ಸಚಿವರಿಗೂ ಇದು ಮೊದಲ ಅಧಿವೇಶನವಾಗಿದೆ. ಹೀಗಾಗಿ ಮುಂಗಾರು ಅಧಿವೇಶನ ರಾಜಕೀಯವಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.
























