ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಒತ್ತುವಾರಿಯಲ್ಲಿದ್ದ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಹಿಂತಿರುಗಿಸಿಕೊಳ್ಳುವ ಕಾರ್ಯ ಪುನರಾರಂಭವಾಗಿದೆ. ಜುಲೈ 17ರಂದು ದೇವಳದ ತೆಂಕಿಲದ 3 ಕಡೆಗಳಲ್ಲಿ ಒಟ್ಟು 1 ಎಕರೆಗೂ ಮಿಕ್ಕಿ ಜಾಗವನ್ನು ದೇವಸ್ಥಾನದ ಸುಪರ್ದಿಗೆ ಪಡೆಯಲಾಗಿದೆ.
ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ, ಮಾಜಿ ಸಮಿತಿ ಸದಸ್ಯ ರಾಮದಾಸ್ ಗೌಡ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕುಂಜಾರು ಮದಗ ಶ್ರೀ ಜರ್ನಾರ್ದನ ದೇವಸ್ಥಾನದ ಸಮಿತಿ ಸದಸ್ಯ ರೋಹನ್ ರಾಜ್, ಲೋಕೇಶ್ ಗೌಡ ಪಡ್ಡಾಯೂರು ಮತ್ತಿತರರು ಹಾಜರಿದ್ದು, ಜಾಗಕ್ಕೆ ಬೇಲಿ ಹಾಕಿ “ದೇವಳದ ನಿವೇಶನ” ಎಂಬ ನಾಮಫಲಕ ಅಳವಡಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಈಶ್ವರ ಭಟ್ ಪಂಜಿಗುಡ್ಡೆ ಅವರು, “ಶಾಸಕ ಅಶೋಕ್ ರೈ ಅವರ ಮಾರ್ಗದರ್ಶನದಂತೆ ದೇವಳದ ಅಭಿವೃದ್ಧಿ ಹಾಗೂ ಜಾಗ ಸ್ವಾಧೀನ ಕಾರ್ಯಗಳನ್ನ ನಡೆಸಲಾಗುತ್ತಿದೆ. ಈಗಾಗಲೇ ರೂ.25 ಕೋಟಿಯಷ್ಟು ಮೌಲ್ಯದ ಜಾಗವನ್ನು ದೇವಳದ ಹೆಸರಿನಲ್ಲಿ ಹಿಂತಿರುಗಿಸಿಕೊಳ್ಳಲಾಗಿದೆ. ಕಳೆದ ಕೆಲವು ಸಮಯ ಈ ಕಾರ್ಯ ವಿಳಂಬವಾಗಿದ್ದರೂ ಈಗ ನಾವು ಸೌಹಾರ್ದಯುತವಾಗಿ ಈ ಕೆಲಸವನ್ನು ಮುಂದುವರಿಸುತ್ತಿದ್ದೇವೆ,” ಎಂದು ತಿಳಿಸಿದರು.
ಇದಲ್ಲದೇ ಮುಂದಿನ ದಿನಗಳಲ್ಲಿ ನೆಲ್ಲಿಕಟ್ಟೆ ಪ್ರದೇಶದಲ್ಲಿಯೂ ಜಾಗ ಸ್ವಾಧೀನ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.