ಪುತ್ತೂರು: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಪದವಿಪೂರ್ವ ವಿದ್ಯಾಲಯ ಶೇಕಡಾ ನೂರು ಫಲಿತಾಂಶ ಸಹಿತವಾಗಿ ಹಲವು ರ್ಯಾಂಕ್ ಗಳನ್ನು ತನ್ನದಾಗಿಸಿರುವುದು ಈಗಾಗಲೇ ದಾಖಲಾಗಿದೆ. ಈ ಮಧ್ಯೆ ಅಂಬಿಕಾದ ಶಿಕ್ಷಣ ಗುಣಮಟ್ಟವನ್ನು ಗುರುತಿಸಿ ಕಾಣಿಸುವಂತಹ ಘಟನೆಗೂ ಈ ಬಾರಿಯ ಪಿಯು ಫಲಿತಾಂಶ ಕಾರಣವಾಗಿದೆ.
ಪ್ರಸ್ತುತ ಪಿಯು ಫಲಿತಾಂಶದಲ್ಲಿ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ನಿಹಾಲ್ ಅಚ್ಚರಿಯ ದಾಖಲೆಯನ್ನು ಬರೆದಿದ್ದಾರೆ. ಮೂಲತಃ ಮೈಸೂರಿನವರಾದ ನಿಹಾಲ್ ಹತ್ತನೆಯ ತರಗತಿಯಲ್ಲಿ ಕೇವಲ 55 ಶೇಕಡಾ ಅಂಕಗಳನ್ನು ದಾಖಲಿಸಿದ್ದರು. ಆದರೆ ಇದೀಗ ಬಂದ ಪಿಯು ಫಲಿತಾಂಶದಲ್ಲಿ ಮೈಸೂರಿನ ಎಚ್.ಡಿ.ಕೋಟೆಯ ನಂಜುಂಡಸ್ವಾಮಿ ಎಂ ಹಾಗೂ ವೀಣಾ ಎಸ್ ದಂಪತಿ ಪುತ್ರ ನಿಹಾಲ್ ಅವರು 94.6 ಶೇಕಡಾ ಅಂಕಗಳನ್ನು ಗಳಿಸಿ ಹೆತ್ತವರ ಮುಖದಲ್ಲಿ ಸಂತಸದ ನಗು ಮೂಡಿಸಿದ್ದಾರೆ.
ಅಂಬಿಕಾ ಪದವಿಪೂರ್ವ ವಿದ್ಯಾಲಯದಿಂದ ಪ್ರಸ್ತುತ ಬಾರಿ ಪರೀಕ್ಷೆ ಬರೆದಿದ್ದ 484 ಮಂದಿ ವಿದ್ಯಾರ್ಥಿಗಳಲ್ಲಿ 158 ಮಂದಿ ತಮ್ಮ ಹತ್ತನೆಯ ತರಗತಿಯ ಫಲಿತಾಂಶಕ್ಕಿಂತಲೂ ಅಧಿಕ ದಾಖಲಿಸಿದ್ದಾರೆ. ಅದರಲ್ಲೂ ನಿಹಾಲ್ ಸುಮಾರು ನಲವತ್ತು ಶೇಕಡಾದಷ್ಟು ಹೆಚ್ಚಿನ ಅಂಕ ಗಳಿಸಿರುವುದು ಸಂಸ್ಥೆಯ ಗುಣಮಟ್ಟವನ್ನು ಎತ್ತಿಹಿಡಿದಿದೆ.
ನನ್ನ ಪ್ರಥಮ ವರ್ಷದ ಪಿಯು ದಿನಗಳಿಂದಲೇ ಅಂಬಿಕಾದ ಎಲ್ಲಾ ಉಪನ್ಯಾಸಕರು ನನ್ನಲ್ಲಿ ಆತ್ಮವಿಶೌಆಸ ತುಂಬುವ ಕಾರ್ಯವನ್ನು ಮಾಡಿದ್ದಾರೆ. ಸಂಸ್ಥೆಯ ಅಧ್ಯಕ್ಷರು ನಾನು ಸಂಸ್ಥೆಗೆ ಸೇರಿದ ಸಂದರ್ಭದಲ್ಲೇ ಖಂಡಿತವಾಗಿಯೂ ನೀನು ಡಿಸ್ಟಿಂಕ್ಷನ್ ಪಡೆಯುತ್ತಿ ಎಂದು ಪ್ರೇರಣೆ ನೀಡಿದ್ದರು. ಅವರ ಮಾತಿನಂತೆ ಮೊದಲ ವರ್ಷವೇ ನಾನು 84 ಶೇಕಡಾ ಹಾಗೂ ಇದೀಗ 94 ಶೇಕಡಾ ಪಡೆಯುವುದಕ್ಕೆ ಸಾಧ್ಯವಾಗಿದೆ. ಅಂಬಿಕಾ ನನ್ನ ಬದುಕಿನಲ್ಲಿ ಒಂದು ಮಹತ್ತರ ಪಾತ್ರ ವಹಿಸಿದೆ ಎಂಬುದು ನಿಹಾಲ್ ಎನ್ ಅವರ ಅಭಿಪ್ರಾಯ.
“ಇದು ನಿಜವಾಗಿಯಾದರೂ ಅಂಬಿಕಾದ ಶಿಕ್ಷಣದ ಸಾರ್ಥಕತೆ. ಒಬ್ಬ ಕಡಿಮೆ ಅಂಕ ಹೊಂದಿದ್ದ ವಿದ್ಯಾರ್ಥಿಯನ್ನು ನಿರೀಕ್ಷೆಗೂ ಮೀರಿ ತಯಾರು ಮಾಡಿ ಅತ್ಯುತ್ಕೃಷ್ಟ ಫಲಿತಾಂಶ ಪಡೆಯುವಂತೆ ಮಾಡುವುದು ಆತ್ಮತೃಪ್ತಿ ಕೊಡುವ ವಿಷಯ. ವಿದ್ಯಾರ್ಥಿಗಳ ಉತ್ಕರ್ಷಕ್ಕಾಗಿ ಎಲ್ಲ ಬಗೆಯ ಮಾರ್ಗದರ್ಶನ, ಆತ್ಮವಿಶ್ವಾಸ ತುಂಬುವ ಕಾರ್ಯಗಳು ನಮ್ಮ ಸಂಸ್ಥೆಯಲ್ಲಿ ಸದಾ ನಡೆಯುತ್ತಲೇ ಇರುತ್ತವೆ.”
– ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು























