ಪುತ್ತೂರು: ನಗರ ಉದ್ಯೋಗದ ಹಿಂದೆ ಓಡುವುದಕ್ಕಿಂತ ಸ್ವಂತವಾಗಿ ಕೃಷಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಯಾಗುವ ಅಗತ್ಯವಿದೆ ಎಂದು ಪ್ರಗತಿಪರ ಕೃಷಿಕ ರಾಧಾಕೃಷ್ಣ ರೈ ಬೂಡಿಯಾರ್ ಹೇಳಿದರು.
ಪರಿಸರದ ಸುಸ್ಥಿರ ಬೆಳವಣಿಗೆಯಲ್ಲಿ ಶಾಲಾ ಮಕ್ಕಳ ಪಾತ್ರ ವಹಿಸುವ ನಿಟ್ಟಿನಲ್ಲಿ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಶಾಲಾ ಮಟ್ಟದಲ್ಲಿ ಇಕೋ–ಕ್ಲಬ್ ವತಿಯಿಂದ ಪುತ್ತೂರಿನ ಹಂಟ್ಯಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಫೆಬ್ರವರಿ 17ರಂದು ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್ ದೇವ ಅವರ ತೋಟಕ್ಕೆ ‘ವನಭೇಟಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಕ್ಕಳಿಗೆ ಕೃಷಿಯ ಮಹತ್ವವನ್ನು ವಿವರಿಸಿದ ಅವರು, ಸಾವಯವ ಕೃಷಿ, ದೇಸಿ ಹೈನುಗಾರಿಕೆ ಹಾಗೂ ಗದ್ದೆ–ತೋಟಗಳ ಮಹತ್ವವನ್ನು ವಿವರಿಸಿ, ಪರಿಸರದ ಪ್ರಾಣಿ–ಪಕ್ಷಿಗಳಿಗಾಗಿ ಸಹ ಧಾನ್ಯ, ಹಣ್ಣು–ತರಕಾರಿಗಳನ್ನು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಾಲೆಯ 1ರಿಂದ 8ನೇ ತರಗತಿಯ ಒಟ್ಟು 64 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಮಾರು 3 ಗಂಟೆಗಳ ಕಾಲ ತೋಟದಲ್ಲಿದ್ದು, ವಿವಿಧ ಕೃಷಿ ಬೆಳೆಗಳು, ಹಣ್ಣಿನ ಮರಗಳು, ತರಕಾರಿಗಳು ಮತ್ತು ವಾಣಿಜ್ಯ ಬೆಳೆಗಳ ಕುರಿತು ತಿಳಿದುಕೊಂಡರು. ಜೊತೆಗೆ ಮರಗಿಡಗಳನ್ನು ಬೆಳೆಸುವ ವಿಧಾನ, ಪೋಷಣೆ ಹಾಗೂ ಕೃಷಿ ಕಾರ್ಯಗಳ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಪಂ ಸದಸ್ಯ ಯತೀಶ್ ದೇವ, ಅವರ ಅತ್ತೆ ಹರಿಣಾಕ್ಷಿ, ಆರ್ಯಾಪು ಗ್ರಾ.ಪಂ. ಸದಸ್ಯ ಹರೀಶ್ ನಾಯಕ್, ನರಿಮೊಗರು ಕ್ಲಸ್ಟರ್ ಸಿಆರ್ಪಿ ಪರಮೇಶ್ವರಿ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯತೀಶ್ ದೇವ ಅವರ ಮನೆಯಲ್ಲಿ ಲಘು ಉಪಾಹಾರ, ಪಾನೀಯ ಮತ್ತು ತಾಜಾ ಹಣ್ಣುಗಳ ವ್ಯವಸ್ಥೆ ಮಾಡಲಾಗಿತ್ತು.




















