ಪುತ್ತೂರು: 94ಸಿ ಹಕ್ಕುಪತ್ರಕ್ಕಾಗಿ ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದ ಪುಣಚ ಗ್ರಾಮದ ಫಲಾನುಭವಿಗಳು ಇದೀಗ ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಆಗಮಿಸಿ, ಶಾಸಕರ ಜೊತೆ ಮಾತನಾಡಿದ್ದಾರೆ.
ಶಾಸಕರ ಜೊತೆ ಮಾತನಾಡುತ್ತಾ, ನಾವು ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಿಲ್ಲ. ನಮ್ಮ ಜಾಗದ ಹಕ್ಕುಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಡಿಸುತ್ತಿದ್ದಾರೆ ಎಂದು ಬಿಜೆಪಿಯವರಲ್ಲಿ ಹೇಳಿದ್ದೇವು. ಆದರೆ ಅವರು ಹಕ್ಕುಪತ್ರ ನಿಮ್ಮ ಕೈಗೆ ಸಿಗಲಿಲ್ಲವಲ್ಲವೇ? ನೀವು ಪ್ರತಿಭಟನೆ ನಡೆಸಿದರೆ ಬೇಗ ನೀಡ್ತಾರೆ. ಇಲ್ಲವಾದರೆ ಕಷ್ಟ ಎಂದ ಅವರು, ನಾವು ನಿಮ್ಮ ವಿರುದ್ಧ ಏನೂ ಮಾತನಾಡಿಲ್ಲ. ಸರಕಾರದ ವಿರುದ್ಧವೂ ಮಾತನಾಡಿಲ್ಲ ಎಂದು ಶಾಸಕರಲ್ಲಿ ಹೇಳಿದರು.
ಪ್ರತಿಕ್ರಿಯಿಸಿದ ಶಾಸಕರು, ನಿಮಗೆ ಹಕ್ಕು ಪತ್ರ ಕೊಟ್ಟು ನಾನು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಬಿಜೆಪಿ ಶಾಸಕರು ನಿಮ್ಮ ಹಕ್ಕು ಪತ್ರ ಮಾಡಿಸಿದ್ದಲ್ಲ, ನಾನೇ ಮಾಡಿಸಿದ್ದು. ಎಲ್ಲವೂ ಸರಿಯಾಗುವಾಗ ನೀವು ಪ್ರತಿಭಟನೆ ಮಾಡಿದ್ದೀರಿ. ಈಗ ಅದಕ್ಕೆ ಬೇರೆಯವರು ಕೇಸು ಹಾಕಿದ್ದಾರೆ. ಮುಂದೆ ಕಾನೂನು ಪ್ರಕಾರ ಏನು ಆಗುತ್ತದೆಯೋ ಅದೇ ರೀತಿ ಆಗಲಿದೆ. ನಿಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದವರು ಈಗ ನಿಮ್ಮ ಜೊತೆ ಇದ್ದಾರಾ? ನೀವು ಬಲಿಪಶುವಾಗಿದ್ದೀರಿ. ಮುಂದಕ್ಕೆ ಏನಾಗುತ್ತೋ ನೋಡೋಣ ಎಂದು ಹೇಳಿದರು.






















