ಪುತ್ತೂರು: ಲವ್ – ಸೆಕ್ಸ್ – ದೋಖಾ ಕೇಸ್ ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರಕ್ಕೆ ತಲುಪಿದ್ದು, ಮೊದಲ ವಿಚಾರಣೆ ಜುಲೈ 1ರಂದು ನಡೆಯಿತು.
ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸುವ ಕುರಿತು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ಈ ಸೂಚನೆ ನೀಡಿತ್ತು. ಅದರಂತೆ ಮೊದಲ ವಿಚಾರಣೆ ನಡೆದಿದ್ದು, ಎರಡೂ ಕಡೆಯವರು ಭಾಗವಹಿಸಿ ಹೇಳಿಕೆ ನೀಡಿದ್ದಾರೆ. ಆದರೆ ಕೃಷ್ಣ ಜೆ. ರಾವ್ ಅವರು ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು, ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿ, ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿದ್ದಾರೆ.
ಸಂತ್ರಸ್ತೆ ಮತ್ತು ಸಂತ್ರಸ್ತೆಯ ತಾಯಿ ಹಾಗೂ ಆರೋಪಿಯ ತಂದೆ ಮತ್ತು ಸಂಬಂಧಿಕರೋರ್ವರು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿದ್ದಾರೆ. ಹೈಕೋರ್ಟ್ ನಿಂದ ನೇಮಕಗೊಂಡಿದ್ದ ವಕೀಲೆ ಸುಶೀಲಾ ಅವರು ಮಧ್ಯಸ್ಥಿಕೆದಾರರಾಗಿ ಹೇಳಿಕೆ ಪಡೆದುಕೊಂಡಿದ್ದಾರೆ.
ಎರಡೂ ಕಡೆಯವರನ್ನು ಜೊತೆಯಾಗಿ ನಂತರ ಪ್ರತ್ಯೇಕವಾಗಿ ಮಾತುಕತೆ ನಡೆಸಲಾಗಿದೆ. ಒಂದೇ ಸಿಟ್ಟಿಂಗಿನಲ್ಲಿ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸುಶೀಲಾ ಅವರು, ಇನ್ನೊಂದು ವಿಚಾರಣೆಗೆ ಕರೆಯುವ ಬಗ್ಗೆ ತಿಳಿಸಿದ್ದಾರೆ. ಜುಲೈ 23ರಂದು ಹೈಕೋರ್ಟಿನಲ್ಲಿ ವಿಚಾರಣೆಗೆ ದಿನ ನಿಗದಿಯಾಗಿದ್ದು, ಅದಕ್ಕಿಂತ ಮೊದಲು ಮಧ್ಯಸ್ಥಿಕೆ ಕೇಂದ್ರದಲ್ಲಿ ಇನ್ನೊಂದು ಸಿಟ್ಟಿಂಗ್ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳಿಕವಷ್ಟೇ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಬೇಕಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಸೂಚಿಸಿತ್ತು. ಅದರಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಮೊದಲ ಸಿಟ್ಟಿಂಗ್ ನಡೆದಿದೆ.






















