ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಉಚಿತ ಬಟ್ಟೆಗಳ ಕೌಂಟರ್ (ರೋಟರಿ ಕ್ಲೋತ್ ಬ್ಯಾಂಕ್) ಅನ್ನು ರೋಟರಿ ಗವರ್ನರ್ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉತ್ತಮ ಕೊಡುಗೆಯೊಂದನ್ನು ರೋಟರಿ ಕ್ಲಬ್ ಪುತ್ತೂರು ಯುವ ಸರಕಾರಿ ಆಸ್ಪತ್ರೆಗೆ ನೀಡಿದೆ. ಉತ್ತಮ ಆಲೋಚನೆಯಿಂದ ಕೂಡಿದ ಕೊಡುಗೆಗಳನ್ನು ಇನ್ನಷ್ಟು ಕೊಡುವಂತಾಗಲಿ. ಸಾಮಾನ್ಯವಾಗಿ ಇಂತಹ ಕೊಡುಗೆಗಳು ಬರಬರುತ್ತಾ ನಿರ್ವಹಣೆಯ ಕೊರತೆಯನ್ನು ಎದುರು ನೋಡುತ್ತವೆ. ಆದರೆ ಇಲ್ಲಿ ನಿರ್ವಹಣೆಯ ಜವಾಬ್ದಾರಿಯನ್ನು ಸದಸ್ಯರೇ ತೆಗೆದುಕೊಂಡಿದ್ದು ಅಭಿನಂದನೀಯ ಎಂದರು.
ಡಾ. ಯದುರಾಜ್ ಮಾತನಾಡಿ, ಈ ಕೊಡುಗೆಯ ಅಗತ್ಯ ಇರುವವರು ಅನೇಕ ಮಂದಿ ಇದ್ದಾರೆ. ರೋಟರಿಯಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸರಕಾರಿ ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವ ನಿಮಗೆಲ್ಲಾ ದನ್ಯವಾದ ಎಂದರು.
ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ಮಾತನಾಡಿ, ಅರ್ಹ ವ್ಯಕ್ತಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಕುಸುಮ್’ರಾಜ್ ಮಾತನಾಡಿ, ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಮೂರು – ನಾಲ್ಕು ಕೊಡುಗೆಗಳನ್ನು ನೀಡಿದ್ದೇವೆ. ಇದೀಗ ಮತ್ತೊಂದು ಜನೋಪಯೋಗಿ ಯೋಜನೆಯನ್ನು ಜನರ ಮುಂದಿಟ್ಟಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದ ಅವರು, ಸರಕಾರಿ ಆಸ್ಪತ್ರೆಯ ಬೇಡಿಕೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಮುಂದಿನ ದಿನದಲ್ಲಿ ಅದನ್ನು ನೀಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ಬೇಡಿಕೆಯ ಹಿನ್ನೆಲೆಯಲ್ಲಿ ರೋಟರಿ ಕ್ಲೋತ್ ಬ್ಯಾಂಕನ್ನು ಕೊಡುಗೆಯಾಗಿ ನೀಡಿದ್ದೇವೆ. ಇದರಲ್ಲಿ 20 ರ್ಯಾಕ್ ಗಳಿದ್ದು, ಸಾರ್ವಜನಿಕರು ಶುಚಿಗೊಳಿಸಿದ ತಮ್ಮ ಬಟ್ಟೆಗಳನ್ನು ಇದರಲ್ಲಿ ಹಾಕಬಹುದು. ಅಗತ್ಯ ಇರುವವರು ನಿಮ್ಮ ಬಟ್ಟೆಯನ್ನು ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದರು.
ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಮುಳಿಯ, ಸ್ಥಾಪಕ ಅಧ್ಯಕ್ಷ ರತ್ನಾಕರ ರೈ, ಝೋನಲ್ ಲೆಫ್ಟಿನೆಂಟ್ ಭರತ್ ಪೈ, ನಿಯೋಜಿತ ಅಧ್ಯಕ್ಷೆ ವಚನಾ ಜಯರಾಂ, ಪೂರ್ವಾಧ್ಯಕ್ಷರಾದ ಚೇತನಾ ಪ್ರಕಾಶ್, ಪಶುಪತಿ ಶರ್ಮಾ, ಪುತ್ತೂರು ಉಮೇಶ್ ನಾಯಕ್, ನರಸಿಂಹ ಪೈ, ಕೋಶಾಧಿಕಾರಿ ಸಚಿನ್ ನಾಯಕ್, ಸಾರ್ಜಂಟ್ ಅಟ್ ಆರ್ಮ್ಸ್ ಹರಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಅಭೀಷ್ ಮೊದಲಾದವರು ಉಪಸ್ಥಿತರಿದ್ದರು.






















