ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜ ಹಾಗೂ ತಾಲೂಕು ಕೇಂದ್ರಗಳ ಪೈಕಿ ಅತೀ ದೊಡ್ಡ ರಾಷ್ಟ್ರಧ್ವಜ ಪುತ್ತೂರಿನಲ್ಲಿ ಮತ್ತೆ ಸೋಮವಾರ ಬಾನಂಗಳದಲ್ಲಿ ರಾರಾಜಿಸಿತು.
ಕೆಲ ದಿನಗಳ ಹಿಂದೆ ಸುರಿದ ಗಾಳಿ – ಮಳೆಗೆ ರಾಷ್ಟ್ರ ಧ್ವಜ ನೆಲಕ್ಕುರುಳಿ, ಸುದ್ದಿಯಾಗಿತ್ತು. ಗಾಳಿಯ ಹೊಡೆತಕ್ಕೆ ಹಾಗೂ ಮಳೆಯ ಭಾರಕ್ಕೆ ರಾಷ್ಟ್ರಧ್ವಜ ಹರಿದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ತಂಭಕ್ಕೆ ಹೊಸ ರಾಷ್ಟ್ರ ಧ್ವಜವನ್ನು ಹಾಕಿರಲಿಲ್ಲ. ಇದೀಗ ವಾತಾವರಣ ತಿಳಿಯಾಗಿದ್ದು, ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಈ ವಾರ ವಾತಾವರಣ ತಿಳಿಯಾಗಿರುವ ಬಗ್ಗೆ ಹವಾಮಾನ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಇದರ ಬಗ್ಗೆ ಪುಡಾ ಜೊತೆಗೆ ಮಾತುಕತೆ ನಡೆಸಿದ್ದೇವೆ. ಮುಂದೆ ಗಾಳಿ- ಮಳೆಯ ಮುನ್ಸೂಚನೆ ಇದ್ದರೆ, ರಾಷ್ಟ್ರಧ್ವಜವನ್ನು ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
























