ಬೆಂಗಳೂರು: ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಮಹತ್ವದ ಕ್ರಮ ಕೈಗೊಂಡಿದ್ದು, ‘ಕರ್ನಾಟಕ ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ’ಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಿದೆ.
ಈ ಮಸೂದೆಯನ್ನು ಶೀಘ್ರವಾಗಿ ಜಾರಿಗೊಳಿಸಲು ಸುಗ್ರೀವಾಜ್ಞೆ ಮೂಲಕ ಕಾರ್ಯರೂಪಕ್ಕೆ ತರಲು ಸರ್ಕಾರ ನಿರ್ಧರಿಸಿದೆ.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮಸೂದೆಯಡಿ ಇ-ಕಾಮರ್ಸ್, ಫುಡ್ ಡೆಲಿವರಿ, ರೈಡ್ ಶೇರಿಂಗ್ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕಾಗಿ ಸೇವೆಯ ಪ್ರತಿ ವಹಿವಾಟಿನ ಮೇಲೆ ಶೇಕಡಾ 1 ರಿಂದ 2ರವರೆಗಿನ ಕ್ಷೇಮಾಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಲಾಗುವುದು. ಇದರಿಂದ ಗ್ರಾಹಕರು ತಮ್ಮ ಆರ್ಡರ್ ಗಳಿಗೆ ಸ್ವಲ್ಪ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಯಾರಿಗೆಲ್ಲಾ ಲಾಭ?
ಸ್ವಿಗ್ಗಿ, ಜೊಮಾಟೊನಂತಹ ಫುಡ್ ಡೆಲಿವರಿ ಸೇವೆಗಳು. ಓಲಾ, ಉಬರ್, ನಮ್ಮ ಯಾತ್ರಿಯಂತಹ ರೈಡ್ ಶೇರಿಂಗ್ ಸೇವೆಗಳು, ಹಾಗೂ ಅಮೆಜಾನ್, ಫಿಪ್ಕಾರ್ಟ್, ಬಿಗ್ ಬಾಸ್ಕೆಟ್ನಂತಹ ಇ ಕಾಮರ್ಸ್ ಕ್ಷೇತ್ರದಲ್ಲಿ ಡೆಲಿವರಿ ಕಾರ್ಮಿಕರಾಗಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ಈ ಯೋಜನೆ ಉಪಯೋಗವಾಗಲಿದೆ. ಈ ಕಾರ್ಮಿಕರು ಪೂರ್ಣಕಾಲಿಕ ಅಥವಾ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದರೂ, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ವಿಮೆ ಮತ್ತು ಆರ್ಥಿಕ ರಕ್ಷಣೆ
ಗಿಗ್ ಕಾರ್ಮಿಕರಿಗಾಗಿ ‘ಕರ್ನಾಟಕ ರಾಜ್ಯ ಗಿಗ್ ವಿಮಾ ಯೋಜನೆ’ಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ, ಅಪಘಾತದಿಂದ ಮರಣವಾದರೆ ಕಾರ್ಮಿಕರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಮತ್ತು 12 ಲಕ್ಷ ರೂ. ಜೀವ ವಿಮೆಯನ್ನು ಒದಗಿಸಲಾಗುವುದು. ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲೂ ಆರ್ಥಿಕ ನೆರವು ಒದಗಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ 1 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ.
ಸರ್ಕಾರದ ಬದ್ಧತೆ
“ಗಿಗ್ ಕಾರ್ಮಿಕರು ಅಪಘಾತ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಅವರಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಮಸೂದೆಯ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಭರವಸೆ ನೀಡಲಾಗುತ್ತಿದೆ” ಎಂದು ಸಚಿವ ಪಾಟೀಲ್ ಹೇಳಿದರು.