ಪುತ್ತೂರು: ಬನ್ನೂರು ಸ್ಫೂರ್ತಿ ಯುವಕ – ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾದ 35ನೇ ವಾರ್ಷಿಕೋತ್ಸವ ಇತ್ತೀಚೆಗೆ ಬನ್ನೂರು ಶನೀಶ್ವರ ಸನ್ನಿಧಿಯ ಸ್ಫೂರ್ತಿ ವೇದಿಕೆಯಲ್ಲಿ ಜರಗಿತು.
ಸಮಾರಂಭ ಉದ್ಘಾಟಿಸಿದ ಕಟ್ಟೆಮಾರು ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟಡ ಕಾರು ಮಾತನಾಡಿ, ಧರ್ಮ – ಭಕ್ತಿ ಇದ್ದಾಗ ದೇವರ ಸಾನಿಧ್ಯ ಬೆಳಗುತ್ತದೆ. ಎಲ್ಲರ ಸಹಕಾರದಿಂದ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಾಗ, ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತವೆ. ಇಂತಹ ಎಲ್ಲಾ ಲಕ್ಷಣಗಳು ಬನ್ನೂರು ಶನೀಶ್ವರ ಸನ್ನಿಧಿಯಲ್ಲಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ, ಸ್ಫೂರ್ತಿ ಯುವ ಸಂಸ್ಥೆಯ ಎಲ್ಲಾ ಕೆಲಸಗಳಿಗೆ ಇಲಾಖೆ ಬೆಂಬಲವಾಗಿ ನಿಂತಿದೆ. ಇನ್ನು ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡಲಾಗುವುದು. ಇಂದಿನ ಪರಿಸ್ಥಿತಿಯಲ್ಲಿ ಸಂಘ – ಸಂಸ್ಥೆಗಳ ಬೆಳವಣಿಗೆ ಸುಲಭದ ವಿಚಾರವಲ್ಲ. ಅಂತಹದ್ದರಲ್ಲಿ ದಿನೇಶ್ ಸಾಲ್ಯಾನ್ ಅವರ ಸಂಚಾಲಕತ್ವದಲ್ಲಿ ಬನ್ನೂರು ಸ್ಫೂರ್ತಿ ಯುವ ಸಂಸ್ಥೆ 35 ವರ್ಷಗಳನ್ನು ಪೂರೈಸಿ, ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವುದು ಶ್ಲಾಘನೀಯ ಎಂದರು.
ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ನಗರಸಭೆ ಸದಸ್ಯೆ ಗೌರಿ ಬನ್ನೂರು, ಸ್ಪೂರ್ತಿ ಯುವಕ ಮಂಡಲ ಅಧ್ಯಕ್ಷ ದೀಪಕ್ ಆಚಾರ್ಯ, ಮಹಿಳಾ ಮಂಡಲ ಅಧ್ಯಕ್ಷೆ ಬೇಬಿ ಶೋಭನ್, ಬಾಲಸಭಾ ಅಧ್ಯಕ್ಷೆ ಧನ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು.
ವರ್ಷಂಪ್ರತಿ ನೀಡುವ ಸ್ಫೂರ್ತಿ ಶ್ರೀ ಪ್ರಶಸ್ತಿಯನ್ನು ಶಿವನಗರ ಶಿವಮಣಿ ಕಲಾಸಂಘದ ಸಂಚಾಲಕ ಮನು ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಯಕ್ಷಗಾನ ಕಲಾವಿದ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಭಂಡಾರಿ, ನಿವೃತ್ತ ಸೈನಿಕ ಅಶೋಕ, ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಣರಾಜ್ ಭಂಡಾರಿ ಹಾಗೂ ಭವ್ಯಾ ಪುತ್ತೂರು, ಲೈನ್ ಮ್ಯಾನ್ ಗಳಾದ ಸಂತೋಷ್, ಶೇಖರ, ಪೂವಪ್ಪ ಗೌಡ, ಜಗದೀಶ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಬನ್ನೂರು ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್, ಹಿತೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸ್ಫೂರ್ತಿ ಬಾಲಸಭಾದ ಸದಸ್ಯರು ಪ್ರಾರ್ಥಿಸಿದರು. ಸ್ಫೂರ್ತಿ ಯುವಸಂಸ್ಥೆಯ ಸಂಚಾಲಕ ದಿನೇಶ್ ಸಾಲ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಫೂರ್ತಿ ಯುವತಿ ಮಂಡಲ ಅಧ್ಯಕ್ಷೆ ಶಬರಿ ವಾರ್ಷಿಕ ವರದಿ ವಾಚಿಸಿದರು. ಸ್ಫೂರ್ತಿ ಯುವಕ ಮಂಡಲ ಉಪಾಧ್ಯಕ್ಷ ನವೀನ್ ರೈ ಬನ್ನೂರು ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಬನ್ನೂರು ಅಂಗನವಾಡಿ ಪುಟಾಣಿಗಳಿಂದ, ಬನ್ನೂರು ಶಾಲಾ ವಿದ್ಯಾರ್ಥಿಗಳಿಂದ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಸಂಸಾರ ಕಲಾವಿದರಿಂದ ಮಾರ್ನೆಮಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಶನೀಶ್ವರ ದೇವರಿಗೆ ವಿಶೇಷ ಪೂಜೆ ನಡೆಯಿತು.























