ಪುತ್ತೂರು: ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದು, ಈ ದೇಶದ ಪ್ರತಿಯೊಬ್ಬರೂ ಕೂಡ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ನಮ್ಮ ದೇಶ ವಿಶ್ವಕ್ಕೆ ಪರಿಚಯವಾಗುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಇವರು ತಿಳಿಸಿದರು.

ಇವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ ಬಿ ಎಸ್ ಇ ಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮವಾದ ರೀತಿಯ ಕೊಡುಗೆಯನ್ನು ನೀಡಬೇಕು. ಪ್ರವಾಹದ ಜೊತೆಯಲ್ಲಿ ಈಜುವ ಕೆಲಸವನ್ನು ಮಾಡಬೇಕಾದ ಅವಶ್ಯಕತೆ ಇದೆ. ಹಾಗಾಗಿ ಸ್ಕೌಟ್ಸ್ ಗೈಡ್ಸ್ ಗೆ ಸೇರಿದ ಪ್ರತಿಯೊಬ್ಬರೂ ಶಿಸ್ತಿನಿಂದ, ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಉಳಿದವರಿಗೆ ಮಾದರಿ ವಿದ್ಯಾರ್ಥಿಗಳಾ ಗಬೇಕು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಎ.ಎಲ್.ಟಿ. ತರಬೇತುದಾರೆ ಸುನೀತಾ ಜೆ. ರೈ ಶಿಬಿರ ಉದ್ಘಾಟಿಸಿ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆ, ಸಮಾಜದಲ್ಲಿ ಎಲ್ಲರೂ ಅಭಿವೃದ್ಧಿ ಹೊಂದಬೇಕು. ಎಲ್ಲರಲ್ಲಿಯೂ ನಾಯಕತ್ವ ಗುಣ, ಸಮಾಜಮುಖಿ ಆಲೋಚನೆಗಳು ಬೆಳೆಯಬೇಕು ಎಂದರು.
ಗಿಡಗಳನ್ನು ನೆಟ್ಟು ಪೋಷಿಸಬೇಕು, ಇದರಿಂದ ಮುಂದಿನ ಜನಾಂಗ ಸುಖಿಯಾಗಿರುತ್ತದೆ. ಇದು ಪುಣ್ಯದ ಕೆಲಸ. ಜೀವನಕ್ಕೆ ಉತ್ತಮವಾದ ದಾರಿಯನ್ನು ಮಾಡುವಲ್ಲಿ ಇಂತಹ ಶಿಬಿರಗಳು ಸಹಾಯಕವಾಗುತ್ತವೆ ಎಂದರು.
ವೇದಿಕೆಯಲ್ಲಿ ಸ್ಕೌಟ್ ಗೈಡ್ಸ್ ಎ.ಎಲ್.ಟಿ. ತರಬೇತಿ ಪಡೆದ ಮೇಬಲ್, ಶಿಬಿರದ ನಾಯಕ ಚಂದ್ರಾಕ್ಷ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಸ್ಕೌಟ್ ಶಿಕ್ಷಕ ಸತೀಶ್ ಇರ್ದೆ ಹಾಗೂ ಗೈಡ್ಸ್ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು. ಸ್ಕೌಟ್ ಶಿಕ್ಷಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.






















