ಸುರತ್ಕಲ್: ಎಂಆರ್ಪಿಎಲ್ನ ಚಿಮಿಣಿಯಿಂದ ಭಾರೀ ಸದ್ದು ಸಹಿತ ಬೆಂಕಿ ಉಗುಳಿದ ಪರಿಣಾಮ ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ರವಿವಾರ ರಾತ್ರಿ ವರದಿಯಾಗಿದೆ.
ರಾತ್ರಿ ಏಕಾಏಕಿ ಚಿಮಿಣಿಯೊಂದರಲ್ಲಿ ಭಾರೀ ಸದ್ದಿನೊಂದಿಗೆ ಬೆಂಕಿ ಉಗುಳಿದೆ. ಇದರಿಂದ ಜೋಕಟ್ಟೆ ಪರಿಸರದಲ್ಲಿ ಭಾರೀ ಹೊಗೆ ಹಾಗೂ ದುರ್ನಾತ ಬೀರುತ್ತಿತ್ತು. ಘಟನೆಯಿಂದ ಜನರು ಆತಂಕಕ್ಕೆ ಒಳಗಾಗು ವಂತಾಯಿತು.
ಪ್ರತಿ ಮಳೆಗಾಲದಲ್ಲೂ ಇಂತಹಾ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ, ಸದ್ದು, ಹೊಗೆ ಸಹಿತ ದುರ್ನಾತ ಬೀರುತ್ತಿದೆ. ಒಳಗೆ ಪ್ರೊಜೆಕ್ಟ್ ನಡೆಯುತ್ತಿದ್ದು, ಅಲ್ಲಿ ಉಳಿದಿರುವ ತ್ಯಾಜ್ಯ ಕೇಮಿಕಲ್ ಗಳನ್ನು ಬೆಂಕಿಕೊಟ್ಟು ಈ ರೀತಿ ಬಿಡಲಾಗುತ್ತಿದೆ ಎಂದು ಜೋಕಟ್ಟೆ ಹೋರಾಟ ಸಮಿತಿಯ ಪದಾಧಿಕಾರಿ ಹಾಗೂ ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಅಬೂಬಕರ್ ಬಾವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಬೃಹದಾಕಾರದ ಬೆಂಕಿ, ದಟ್ಟಹೊಗೆ, ಸದ್ದು ಏಕಕಾಲದಲ್ಲಿ ಕಾಣಿಸಿಕೊಂಡಿದ್ದು, ಇದು ಜೋಕಟ್ಟೆಯಿಂದ ದೂರದಲ್ಲಿರುವ ಸುರತ್ಕಲ್ ವರೆಗೂ ಗೋಚರಿಸುತ್ತಿತ್ತು. ಇದರಿಂದಾಗಿ ಜನರು ಹೆದರಿದ್ದಾರೆ. ಸಂಸ್ಥೆಗಳು ಈ ಬಗ್ಗೆ ಯಾರಿಗೂ ಸ್ಪಷ್ಟನೆ ನೀಡುತ್ತಿಲ್ಲ. ಜನವಸತಿ ಪ್ರದೇಶದಲ್ಲಿ ಇರುವ ಕಂಪೆನಿ ಬೇಜವಾಬ್ದಾರಿ ಪ್ರದರ್ಶಿಸುವುದು ಸರಿ ಯಲ್ಲ. ಕಂಪೆನಿ ಅಥವಾ ಜಿಲ್ಲಾಡಳಿತ ಈ ಬಗ್ಗೆ ಜನರಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಜೋಕಟ್ಟೆ ನಾಗರೀಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಂ.ಆರ್.ಪಿ.ಎಲ್. ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಷ್ಟನೆ ಸಿಕ್ಕಿಲ್ಲ. ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಲು ಪ್ರಯತ್ನಿಸಿದರೂ, ಸಾಧ್ಯವಾಗಿಲ್ಲ.























