ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು ಕ್ರೆöÊಸ್ತ ಸಮುದಾಯದ ಯಾವುದೇ ಪಾತ್ರವಿಲ್ಲ. ಆದರೂ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಅನಗತ್ಯವಾಗಿ ಮುಸ್ಲಿಮರು ಮತ್ತು ಕ್ರೆöÊಸ್ತರ ಹೆಸರನ್ನು ತಳುಕು ಹಾಕುವ ಮೂಲಕ ಜಿಲ್ಲೆಯಲ್ಲಿ ಕೋಮು ವೈಷಮ್ಯ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಅವರು ಹೇಳಿಕೆ ನೀಡಿ, ಧರ್ಮಸ್ಥಳದಲ್ಲಿ ಮಾತ್ರವಲ್ಲ, ಮಸೀದಿ ಮತ್ತು ಚರ್ಚ್ಗಳಲ್ಲಿ ಕೂಡ ಶವ ಹೂತಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇದು ಅವರ ಎಡಬಿಡಂಗಿತನದ ಹೇಳಿಕೆಯಾಗಿದೆ. ಚರ್ಚ್ ಮತ್ತು ಮಸೀದಿಗಳಲ್ಲಿ ಶವ ಹೂಳುವುದಿಲ್ಲ. ಇವುಗಳ ಸಮೀಪ ಇರುವ ಪ್ರತ್ಯೇಕ ಸ್ಮಶಾನದಲ್ಲಿ ದಫನ ಮಾಡಲಾಗುತ್ತದೆ. ಇಲ್ಲಿ ದಫನ ಮಾಡಲಾದ ಎಲ್ಲ ಶವಗಳ ಬಗ್ಗೆ ಅಧಿಕೃತ ದಾಖಲೆಗಳಿವೆ. ಇದಾವುದೂ ನಿಗೂಢ ಶವಗಳಲ್ಲ. ಮೃತಪಟ್ಟ ವ್ಯಕ್ತಿಗಳಿಗೆ ಅಧಿಕೃತವಾಗಿ ಮಾಡಲಾದ ದಫನ ಗೌರವವಾಗಿದೆ. ನಾವು ಎಲ್ಲೆಂದರಲ್ಲಿ ಶವ ಹೂಳುವುದಿಲ್ಲ. ಕಾಡಿನಲ್ಲೂ ಹೂಳುವುದಿಲ್ಲ. ಧರ್ಮಸ್ಥಳದ ಪ್ರಕರಣಕ್ಕೂ ಮಸೀದಿ, ಚರ್ಚ್ಗಳ ದಫನ ಭೂಮಿಗೂ ಏನು ಸಂಬಂಧವಿದೆ ಎಂದರು.
ಪೂಜಾರಿ ಅವರು ಧರ್ಮಸ್ಥಳಕ್ಕೆ ಬೆಂಬಲ ನೀಡಲಿ. ನಮ್ಮದೇನೂ ತರಕಾರಿಲ್ಲ. ಆದರೆ ಅವರು ಇದರಲ್ಲಿ ಚರ್ಚ್, ಮಸೀದಿ ಎಳೆದು ತಂದಿದ್ದು ಯಾಕೆ ಎಂದು ಪ್ರಶ್ನಿಸಿದರು.
ಜನಾರ್ದನ ಪೂಜಾರಿ ಅವರ ನಾಯಕತ್ವದ ಮೇಲೆ ನಮಗೆಲ್ಲ ಗೌರವವಿದೆ. ಜಿಲ್ಲೆಯಲ್ಲಿ ಅವರು 1977ರ ಬಳಿಕ ಸತತ 4 ಬಾರಿ ಗೆದ್ದರು. 1977ರ ಬಳಿಕ ಯಾರೆಲ್ಲ ಮುಸ್ಲಿಮ್, ಕ್ರೈಸ್ತರು ಮೃತಪಟ್ಟು ಸಮಾಧಿಯಲ್ಲಿ ಮಲಗಿದ್ದಾರೋ ಅವರೆಲ್ಲ ಜನಾರ್ದನ ಪೂಜಾರಿ ಅವರಿಗೆ ಮತ ನೀಡಿದವರೆ. ಇದು ಪೂಜಾರಿಯವರಿಗೆ ಗೊತ್ತಿಲ್ಲವೇ? ಪೂಜಾರಿ ಅವರನ್ನು ಗೆಲ್ಲಿಸುತ್ತಾ ಬಂದಿದ್ದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಹುದೊಡ್ಡ ಕೊಡುಗೆ ಇದೆ. ಅವರು ಗೆದ್ದಾಗಲೂ, ಸೋತಾಗಲೂ ಮುಸ್ಲಿಂ, ಕ್ರೈಸ್ತರು ಮತ ನೀಡಿದ್ದಾರೆ. ಇಂಥ ಸಮುದಾಯಕ್ಕೆ ಪೂಜಾರಿಯವರು ಕೊಡುವ ಗೌರವ ಇದಾ? ಅವರ ಸಮುದಾಯವೇ ಅವರನ್ನು ಸೋಲಿಸಿ ಮನೆಯಲ್ಲಿ ಕೂರಿಸಿದೆ ಹೊರತು ಅಲ್ಪಸಂಖ್ಯಾತ ಸಮುದಾಯವಲ್ಲ ಎಂದರು.
ಮುಸ್ಲಿಮರಾಗಲಿ, ಕ್ರೈಸ್ತರಾಗಲಿ ಧರ್ಮಸ್ಥಳದ ಬಗ್ಗೆ ಮಾತನಾಡಿಲ್ಲ. ಹೀಗಿದ್ದರೂ ನಮ್ಮ ಸಮುದಾಯದ ಹೆಸರು ತಂದಿದ್ದಾರೂ ಯಾಕೆ? ಬಿಜೆಪಿ, ಆರೆಸ್ಸೆಸ್ನವರಿಗೆ ಮುಸ್ಲಿಮರ ವಿರುದ್ಧ ಮಾತನಾಡಿದ್ದರೆ ನಿದ್ದೆ ಬರುವುದಿಲ್ಲ. ಆದರೆ ಪೂಜಾರಿ ಅವರು ಆರೆಸ್ಸೆಸ್ ಧಾಟಿಯಲ್ಲಿ ಮಾತನಾಡುತ್ತಾರೆ ಎಂದಾದರೆ ಅವರ ಸಿದ್ಧಾಂತ ಯಾವುದು ಎಂದು ಕೇಳಬೇಕಾಗುತ್ತದೆ. ಅವರು ಕಳೆದ ಅನೇಕ ವರ್ಷಗಳಿಂದ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ ಎಂದರು.
ಚರ್ಚ್ನಲ್ಲಿ ದಫನವಿಲ್ಲ
ನಗರ ಕಾಂಗ್ರೆಸ್ ಮುಖಂಡ ಮೌರಿಸ್ ಮಸ್ಕರೇನಸ್ ಮಾತನಾಡಿ, ಹಿಂದೆಲ್ಲ ಕ್ರೈಸ್ತರಲ್ಲಿ ಸಂತರಾದವರ ಮೃತದೇಹಗಳನ್ನು ಚರ್ಚ್ನ ಒಳಗೆ ದಫನ ಮಾಡುತ್ತಿದ್ದರು. 50 ವರ್ಷಗಳ ಹಿಂದೆ ಚರ್ಚ್ ನಿಯಮಗಳಲ್ಲಿ ತಿದ್ದುಪಡಿ ತಂದು ಸ್ಮಶಾನದಲ್ಲೇ ದಫನ ಮಾಡುವ ಪದ್ಧತಿ ಜಾರಿಗೆ ಬಂತು. ಸರಕಾರವೇ ಕೊಟ್ಟ ದಫನ ಭೂಮಿ ಚರ್ಚ್ಗಳಲ್ಲಿದೆ. ಯಾವುದೇ ರೀತಿಯ ಸಂಶಯಾಸ್ಪದ ಸಾವಿನ ದೇಹಗಳನ್ನು ಅಲ್ಲಿ ದಫನ ಮಾಡುವುದಿಲ್ಲ. ಪೊಲೀಸ್ ಇಲಾಖೆಯಿಂದ ನಿರಕ್ಷೇಪಣಾ ಪತ್ರ ನೀಡಿದ ಶವಗಳನ್ನು ಮಾತ್ರ ದಫನ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಮುಖಂಡರಾದ ರಶೀದ್ ಮುರ, ವಾಲ್ಟರ್ ಸಿಕ್ವೆರ, ರಿಯಾಜ್ ಪರ್ಲಡ್ಕ ಉಪಸ್ಥಿತರಿದ್ದರು.